ಗದಗ:- ಲೈಸನ್ಸ್ ನವೀಕರಣಕ್ಕೆ ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಗದಗ ನಗರದ ಸಾಯಿ ಬಾಬಾ ಗುಡಿ ಹತ್ತಿರ ಜರುಗಿದೆ.
ಗದಗ ಜಿಲ್ಲೆಯ ರೋಣ ಭೂ ಮಾಪನಾ ಸಹಾಯಕ ನಿರ್ದೇಶಕ ಆರ್ ವಿ ಗಿರೀಶ್ ಲೋಕಾ ಬಲೆಗೆ ಬಿದ್ದ ಅಧಿಕಾರಿ ಎನ್ನಲಾಗಿದೆ. ಅಧಿಕಾರಿ ಆರ್ ವಿ ಗಿರೀಶ್ ಅವರು, ಸರ್ವೆಯರ್ ಲೈಸನ್ಸ್ ನವೀಕರಣಕ್ಕೆ ಅರುಣ್ ಕುಮಾರ್ ಎನ್ನುವವರ ಬಳಿ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆ ಅರುಣ್ ಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ದೂರಿನ ಹಿನ್ನೆಲೆ, ಗದಗ ನಗರದ ಸಾಯಿ ಬಾಬಾ ಗುಡಿ ಹತ್ತಿರ ಅಧಿಕಾರಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.
ಲೋಕಾಯುಕ್ತ ಡಿಎಸ್ಪಿ ವಿಜಯ್ ಬಿರಾದಾರ್ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸಪೆಕ್ಟರ್ ಗಳಾದ ರವಿ ಪುರುಷೋತ್ತಮ್, ಎಸ್ ಎಸ್ ತೇಲಿ ಹಾಗೂ ಸಿಬ್ಬಂದಿಯಿಂದ ಈ ದಾಳಿ ನಡೆದಿದೆ.



