ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಟಿಪ್ಪು ಸುಲ್ತಾನ ಸರ್ಕಲ್ನಿಂದ ಮುಳಗುಂದ ನಾಕಾ ಮುಖ್ಯ ರಸ್ತೆ, ಉಡುಪಿ ಹೋಟೆಲ್ ಪಕ್ಕದಲ್ಲಿ ನಡೆಯುತ್ತಿದ್ದ ಪೈಪ್ ದುರಸ್ತಿ ಕಾರ್ಯದ ಸಮಯದಲ್ಲಿ ಮಣ್ಣು ಕುಸಿದು ಪ್ರಾಣ ಕಳೆದುಕೊಂಡ ನಜೀರಸಾಬ ಬೈಲಹುಲಿ ಇವರ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಇಂತಹ ಘಟನೆ ನಡೆದು ಸುಮಾರು 10 ದಿನಗಳು ಕಳೆದರೂ ಸಂಬಂಧಿಸಿದ ಶುಭಂ ಏಜೆನ್ಸಿ ಆಗಲಿ, ನೀರಿನ ಪೈಪ್ಲೈನ್ ದುರಸ್ತಿ ಕಾರ್ಯ ಕೈಗೊಂಡ ನಗರಸಭೆ ಅಧಿಕಾರಿಗಳಾಗಲಿ, ಗದಗ ಜಿಲ್ಲಾಧಿಕಾರಿಗಳಾಗಲಿ ಈವರೆಗೂ ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡದೆ ಇರುವುದು ವಿಷಾದನೀಯ ಸಂಗತಿ ಎಂದು ಗದಗ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಬ್ಬ ಕೂಲಿ ಕಾರ್ಮಿಕನ ಪ್ರಾಣಕ್ಕೆ ಯಾವುದೇ ರೀತಿಯ ಬೆಲೆ ಇಲ್ಲ ಎಂಬಂತೆ ವರ್ತಿಸುತ್ತಿರುವ ಅಧಿಕಾರಿಗಳಾಗಲಿ ಅಥವಾ ದೂರು ದಾಖಲಾಗಿ ಹತ್ತು ದಿನಗಳಾದರೂ ಈವರೆಗೆ ಆರೋಪಿಗಳನ್ನು ಬಂಧಿಸಿದೆ ಇರುವ ಪೊಲೀಸ್ ಇಲಾಖೆಯ ಕಾರ್ಯದ ಮೇಲೆಯೂ ಸಂಶಯ ವ್ಯಕ್ತವಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಈ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ಕೊಡಿಸಬೇಕೆಂದು ಹಾಜಿಅಲಿ ಎಚ್.ಕೊಪ್ಪಳ ಆಗ್ರಹಿಸಿದ್ದಾರೆ.