ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಲ್ ಸೋಫಿಯಾ ಅವರು `ಆಪರೇಷನ್ ಸಿಂಧೂರ’ದ ನಂತರ ಪ್ರಸಿದ್ಧಿ ಪಡೆದಿರುವುದು ಸಮಸ್ತ ಭಾರತೀಯ ನಾಗರಿಕರು, ಮುಸ್ಲಿಂ ಸಮುದಾಯದವರು ಹೆಮ್ಮೆ ಪಡುವ ಸಂಗತಿಯಾಗಿದೆ. ಆದರೆ, ಮಧ್ಯಪ್ರದೇಶದ ಬುಡಕಟ್ಟು ವ್ಯವಹಾರಗಳ ಸಚಿವ ವಿಜಯ್ ಶಾ ಇತ್ತೀಚೆಗೆ ಸೋಫಿಯಾ ಖುರೇಷಿ ಅವರ ಧರ್ಮವನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ನಗರಸಭೆ ಸದಸ್ಯ, ವಿರೋಧ ಪಕ್ಷದ ಉಪ ನಾಯಕ ಜನಾಬ ಬರಕತ ಅಲಿ ಮುಲ್ಲಾ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಶಾಸಕಿ, ಮಾಜಿ ಕ್ಯಾಬಿನೆಟ್ ಸಚಿವೆ ಉಷಾ ಠಾಕೂರ್ ಮತ್ತು ಬಿಜೆಪಿ ಮುಖಂಡರ ಎದುರಲ್ಲೇ ಅವರು ಈ ಮಾತುಗಳನ್ನಾಡಿದ್ದರು. ಇಂತಹ ಕೋಮು ಸೌಹಾರ್ದತೆಯನ್ನು ಕದಡುವ, ಅಸಂಬದ್ಧ ಹೇಳಿಕೆಗಳನ್ನು ತಮ್ಮದೇ ಪಕ್ಷದ ರಾಜಕೀಯ ನಾಯಕರ ಸಮ್ಮುಖದಲ್ಲಿಯೇ ನೀಡಿದ ಸಚಿವ ವಿಜಯ್ ಶಾರನ್ನು ಕೂಡಲೇ ಅಮಾನತುಗೊಳಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.