ವಿಜಯಸಾಕ್ಷಿ ಸುದ್ದಿ, ಗದಗ: ನಗರದ ನವೀಕೃತ ರೈಲ್ವೆ ನಿಲ್ದಾಣಕ್ಕೆ ಶ್ರೀ ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳವರ ಹೆಸರು ನಾಮಕರಣ ಮಾಡಬೇಕೆಂದು ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನೆ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಗದುಗಿನ ನಡೆದಾಡುವ ದೇವರು, ಪವಾಡ ಪುರುಷರು, ಅಂಧ, ಅನಾಥರ ಆಶಾಕಿರಣ, ಕಣ್ಣಿಲ್ಲದಿದ್ದರೂ ಊರಿಗೆ ಕಣ್ಣಾಗಿ ಭಕ್ತರಿಗೆ ಆಶೀರ್ವಚನ ಮಾಡಿ ಉದ್ಧಾರ ಮಾಡಿದ ಮಹಾದೇವ ಮಾನವರು, ಹಸಿದು ಬಂದವರಿಗೆ ಅನ್ನದಾಸೋಹ ನೀಡಿದವರು ಪಂ ಪುಟ್ಟರಾಜರು. ನಾವು ದೇವರನ್ನು ನೋಡಿಲ್ಲವಾದರೂ ಶ್ರೀ ಗುರು ಪುಟ್ಟರಾಜ ಗವಾಯಿಗಳರಲ್ಲಿ ನಾವು ಶಿವನ ಅವತಾರವನ್ನು ಕಂಡಿದ್ದೇವೆ. ಇಂತಹ ನಡೆದಾಡುವ ದೇವರ ಹೆಸರು ಗದಗ ರೈಲ್ವೆ ನಿಲ್ದಾಣಕ್ಕೆ ಇಡುವ ಮುಖಾಂತರ ಗವಾಯಿಗಳವರಿಗೆ ಗೌರವ ಸಲ್ಲಿಸಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮಾತನಾಡಿ, ನಿಮ್ಮ ಮನವಿಯನ್ನು ಪರಿಗಣಿಸಿ ಅಧಿಕಾರಿಗಳೊಂದಿಗೆ ಮಾತನಾಡಿ, ಆದಷ್ಟು ಶೀಘ್ರ ರೈಲು ನಿಲ್ದಾಣಕ್ಕೆ ಗವಾಯಿಗಳ ಹೆಸರು ನಾಮಕರಣಕ್ಕೆ ಶಿಫಾರಸು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಲಿಂಗ ಶಾಸ್ತ್ರಿ ಅಜ್ಜನವರು, ಕ್ರಾಂತಿ ಸೇನಾ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಬೀಬ್, ರಾಣಿ ಚಂದಾವರಿ, ಕ್ರಾಂತಿ ಸೇನಾ ತಾಲೂಕಾಧ್ಯಕ್ಷ ಭರತ್ ಮಾರಿಯಪ್ಪನವರ್, ಉಪಾಧ್ಯಕ್ಷ ಭೀಮಾ ಕಾಟಿಗರ್, ಕಿರಣ ಪಟ್ಟಣಶೆಟ್ಟಿ, ಸುನೀಲ್ ಅರಸಿದ್ಧಿ, ಅನುಪ, ಶಿವು ಕುಂಬಾರ ಮುಂತಾದವರು ಉಪಸ್ಥಿತರಿದ್ದರು.



