ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪ್ರಮುಖ ರಸ್ತೆಯಾಗಿರುವ ಬಜಾರ ರಸ್ತೆಯಲ್ಲಿನ ಚಾವಡಿ ಹತ್ತಿರದಿಂದ ಕೆಂಚಲಾಪೂರ ರಸ್ತೆಯವರೆಗೂ ಸಿ.ಸಿ ರಸ್ತೆ ಕಾಮಗಾರಿಗೆ ಪುರಸಭೆಯಲ್ಲಿ ಟೆಂಡರ್ ಆಗಿದ್ದು, ಆ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಕೂಡಲೇ ಈ ರಸ್ತೆಯ ಕಾಮಗಾರಿಯನ್ನು ತಕ್ಷಣದಿಂದ ಪ್ರಾರಂಭವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಜಯಕರ್ನಾಟಕ ಸಂಘಟನೆ ಸದಸ್ಯರು ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಮುಖಂಡರು, ಇದು ಪ್ರಮುಖ ರಸ್ತೆಯಾಗಿದ್ದು, ಅಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಶಾಲಾ ಮಕ್ಕಳಿಗೆ ಬಂದು ಹೋಗಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿ ಪ್ರಾರಂಭಿಸಿ ಮಕ್ಕಳಿಗೆ, ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಆಡಳಿತ ಮಂಡಳಿಯ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಜಯ ಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಇಸಾಕ್ಭಾಷಾ ಹರಪನಹಳ್ಳಿ, ತಾಲೂಕಾಧ್ಯಕ್ಷ ರಮೇಶ ಹಂಗನಕಟ್ಟಿ, ನಗರ ಅಧ್ಯಕ್ಷ ನಜೀರ ಬಾಗಲಕೋಟಿ, ವೀರಭದ್ರಯ್ಯ ಮಠಪತಿ, ಬಸವರಾಜ ಮೇಲ್ಮುರಿ, ಸಚಿನ್ಕುಮಾರ ಮೇಲ್ಮುರಿ, ಮೈನುದ್ದಿನ್ ಮೋಮಿನ, ಗೌಸ್ ಸೂರಣಗಿ, ಹುಬ್ಬಳ್ಳಿ, ನೂರಅಹ್ಮದ್ ಮುಂತಾದವರಿದ್ದರು.