ಬೆಂಗಳೂರು: ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು RCB ಮತ್ತು KSCA ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರಿಂದ RCB ಟಿಕೆಟ್ ಬೇಡಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, “ಸರ್ಕಾರ ಈ ವಿಷಯದಲ್ಲಿ ಎಷ್ಟು ಮಟ್ಟಿಗೆ ಭಾಗಿಯಾಗಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ಇದುವರೆಗೆ ಸರ್ಕಾರ ಮಧ್ಯಪ್ರವೇಶಿಸಿಲ್ಲ. ದುರಂತದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ, ಅದರ ಶಿಫಾರಸುಗಳ ಆಧಾರದಲ್ಲಿ ಪಂದ್ಯಕ್ಕೆ ಅನುಮತಿ ನೀಡಿದ್ದೇವೆ” ಎಂದು ಹೇಳಿದರು.
ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳೂ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿವೆ. ಸರ್ಕಾರ ಕಾನೂನು ಚೌಕಟ್ಟಿನೊಳಗೆ ತೀರ್ಮಾನ ತೆಗೆದುಕೊಳ್ಳಲಿದೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಒಳಮೀಸಲಾತಿ ಕುರಿತ ವಿಶೇಷ ಸಂಪುಟ ಸಭೆಯನ್ನು ಮುಂದೂಡಿರುವ ಕುರಿತು ಮಾತನಾಡಿದ ಸಚಿವರು, ಅಟಾರ್ನಿ ಜನರಲ್ ಸಲಹೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. “ಈಗ ತೀರ್ಮಾನ ಕೈಗೊಂಡರೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಅವರು ತಿಳಿಸಿದರು.
ಸಂಪುಟ ಪುನರ್ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಹೇಳಬೇಕು. ಹಲವರು ಸಭೆ ನಡೆಸಿ, ಚರ್ಚೆ ಮಾಡುತ್ತಿದ್ದಾರೆ. ಸಚಿವರಾಗಲು ಹಲವರು ಸಮರ್ಥರಾಗಿದ್ದು, ಅವಕಾಶ ಯಾರಿಗೆ ಸಿಗುತ್ತದೋ ಅವರು ಸಚಿವರಾಗುತ್ತಾರೆ” ಎಂದು ಹೇಳಿದರು.



