ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಇತ್ತೀಚೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮದರಸಾಗಳು ಮತ್ತು ಮದರಸಾ ಮಂಡಳಿಗಳಿಗೆ ನೀಡುವ ಎಲ್ಲಾ ಆರ್ಥಿಕ ನೆರವುಗಳನ್ನು ನಿಲ್ಲಿಸಬೇಕೆಂದು ರಾಜ್ಯಗಳಿಗೆ ಪತ್ರ ಬರೆದಿರುವುದು ಖಂಡನೀಯ. ಇದು ಸಂವಿಧಾನಿಕ ಹಕ್ಕು ನಿರಾಕರಿಸುವ ಹುನ್ನಾರವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಇದು ಮಕ್ಕಳನ್ನು ಧಾರ್ಮಿಕ ಶಿಕ್ಷಣದಿಂದ ವಂಚಿಸುವ ಹುನ್ನಾರವಾಗಿದೆ.
ಮದರಸಾಗಳನ್ನು ಕೇಂದ್ರ ಸರಕಾರದ ನಿಯಂತ್ರಣದಲ್ಲಿ ತರುವ ಷಡ್ಯಂತ್ರದ ಭಾಗವಾಗಿದೆ ಎಂದಿದ್ದಾರೆ. ಕೆಲವರು ಮದರಸಾ ಶಿಕ್ಷಣದ ಬಗ್ಗೆ ಕೆಂಗಣ್ಣು ಬೀರಿ ಪೂರ್ವಾಗ್ರಹ ಪೀಡಿತರಾಗಿ ವೃಥಾ ಆರೋಪ ಹೊರಿಸುತ್ತಾರೆ. ನಿಜವಾಗಿ ಮದರಸಾ ಶಿಕ್ಷಣವು ಧಾರ್ಮಿಕ ಅಚ್ಚುಕಟ್ಟು, ಶಿಸ್ತು, ಆರಾಧನಾ ಕ್ರಮಗಳ ಜೊತೆಗೆ ದೇವಭಯ ಮೂಡಿಸಿ ಕೆಡುಕಿನತ್ತ ಸಾಗದಂತೆ ತರಬೇತಿ ನೀಡುತ್ತದೆ.
ಅದರ ಪಠ್ಯ ಪುಸ್ತಕಗಳು ಬಹಿರಂಗವಾಗಿಯೇ ಇದೆ. ಅದರಲ್ಲೇನೂ ರಹಸ್ಯವಿಲ್ಲ. ಆದರೂ ಆರ್ಥಿಕ ನೆರವುಗಳನ್ನು ತಡೆಹಿಡಿಯುವಂತಹ ಕ್ರಮಕ್ಕೆ ಕೇಂದ್ರ ಸರಕಾರದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ಇದು ಖಂಡನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.