ವಿಜಯಸಾಕ್ಷಿ ಸುದ್ದಿ, ನರೇಗಲ್ : ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇತ್ತೀಚೆಗೆ ನರೇಗಲ್ ಪಟ್ಟಣ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿದರು. ಗಜೇಂದ್ರಗಡದಿಂದ ನರೇಗಲ್ಲ ಪಟ್ಟಣಕ್ಕೆ ಆಗಮಿಸಿದ ಅವರನ್ನು ಪ.ಪಂ ಮುಖ್ಯಾಧಿಕಾರಿ ರಮೇಶ ಹೊಸಮನಿ ಮತ್ತು ಸಿಬ್ಬಂದಿಯವರು ಸ್ವಾಗತಿಸಿದರು.
ಪಟ್ಟಣ ಪಂಚಾಯಿತಿಯ ಎಲ್ಲ ವಿಭಾಗಗಳನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗಳು, ನರೇಗಲ್ ಪಟ್ಟಣ ಪಂಚಾಯಿತಿ ಅಭಿವೃದ್ಧಿಯಿಂದ ಹಿನ್ನಡೆ ಅನುಭವಿಸುತ್ತಿದ್ದು, ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಕರ ವಸೂಲಿ ಮಾಡಬೇಕೆಂದು ಪ.ಪಂ ಅಧಿಕಾರಿಗಳಿಗೆ ಹೇಳಿದರು.
ಪ.ಪಂ ಕಟ್ಟಡ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿ ದಾಖಲೆಗಳನ್ನು ಸಮರ್ಪಕವಾಗಿ ಇರಿಸಲು ತಿಳಿಸಿದರು.
ಆದಾಯದ ಮೂಲವಾಗಿರುವ ವಾಣಿಜ್ಯ ಮಳಿಗೆಗಳನ್ನು ಆದಷ್ಟು ಬೇಗ ಟೆಂಡರ್ ಕರೆಯಬೇಕು. ಬರಬೇಕಾದ ಹಳೆಯ ಬಾಕಿ ಮೊತ್ತವನ್ನು ಪಾವತಿಸಲು ಅವರು ಹಿಂದೇಟು ಹಾಕಿದಲ್ಲಿ, ಆ ವ್ಯಾಪಾರಸ್ಥರ ಮನೆಗಳ ಮೇಲೆ ಭೋಜಾ ಕೂರಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಪ.ಪಂ ಸದಸ್ಯರು ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತೆರವುಗೊಂಡರು ವ ಕುರಿತು ಪ್ರಶ್ನಿಸಿದರು. ಸದಸ್ಯರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರ ನೀಡಿ, ರಾಜ್ಯದ ಬಹುತೇಕ ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವುಗೊಂಡಿದ್ದು, ಸರ್ಕಾರ ಮೀಸಲಾತಿಯನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿದೆ. ಸದಸ್ಯರ ಅವಧಿಯು ಇನ್ನೂ ಎರಡೂವರೆ ವರ್ಷ ಇದೆ.
ಸದಸ್ಯರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಕುಮಾರಸ್ವಾಮಿ ಕೋರಧ್ಯಾನಮಠ, ಶ್ರೀಶೈಲಪ್ಪ ಬಂಡಿಹಾಳ, ನಿಂಗಪ್ಪ ಚಲವಾದಿ, ಯಲ್ಲಪ್ಪ ಮಣ್ಣೊಡ್ಡರ, ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಮರಿಗೌಡ್ರ, ಅಭಿಯಂತರ ಉಮೇಶ ಓಜನಳ್ಳಿ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಆರೋಗ್ಯ ನಿರೀಕ್ಷಕ ರಾಮಚಂದ್ರ ಕಜ್ಜಿ, ರಮೇಶ ಹಲಗಿಯವರ ಸೇರಿದಂತೆ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಇದ್ದರು.
ಈಗಾಗಲೇ ಸಾರ್ವಜನಿಕರಿಂದ ನರೇಗಲ್ಲ ಪಟ್ಟಣಕ್ಕೆ ಆಂಬ್ಯುಲೆನ್ಸ್ ಸೇವೆಯ ಅವಶ್ಯಕತೆ ಇರುವುದು ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಿಸಿದ ಆರೋಗ್ಯ ಇಲಾಖೆಯ ಡಿ.ಎಚ್.ಓ ಅವರನ್ನು ಸಂಪರ್ಕಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಒದಗಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭರವಸೆ ನೀಡಿದರು.