ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಈ ಬಾರಿ ಮುಂಗಾರು ಮಳೆ ಉತ್ತಮ ಎನ್ನಬಹುದಾಗಿದ್ದರೂ ಬೆಳೆಗಳಿಗೆ ರೋಗ ಭಾದೆಗಳು ಕಾಣಿಸಿಕೊಳ್ಳುತ್ತಿರುವದರಿಂದ ದೊಡ್ಡ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಎಲ್ಲೆಡೆ ಬೆಳೆಗಳು ಉತ್ತಮವಾಗಿ ಬೆಳೆಯುತ್ತಿದ್ದು, ಈ ನಡುವೆ ಕೀಟ ಬಾಧೆ ಕಾಣಿಸಿಕೊಳ್ಳತೊಡಗಿದೆ. ಇದಕ್ಕೆ ಉದಾಹರಣೆಯಾಗಿ ಸಮೀಪದ ಗೊಜನೂರು ಗ್ರಾಮದ ಚಂದ್ರಗೌಡ ದೊಡ್ಡಗೌಡ್ರ ಅವರ ಒಂದು ತಿಂಗಳಿನ ಶೇಂಗಾ ಬೆಳೆಯ ಸಸ್ಯಗಳಿಗೆ ಕೀಟವು ಬೇರು ಹಾಗೂ ಕಾಂಡಗಳನ್ನು ಕಡಿದು ಬೆಳೆ ಹಾಳು ಮಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಸ್ಫೂರ್ತಿ ಅವರು ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರೀಕ್ಷಿಸಿದರು. ಈ ಸಂದರ್ಭದಲ್ಲಿ ರೋಗ ಭಾದೆ ಕುರಿತು ರೈತರಿಗೆ ಸಲಹೆ ನೀಡಿದ ಅವರು, ಶೇಂಗಾ ಬೆಳೆಯನ್ನು ಬೀಜೋಪಚಾರ ಮಾಡಿ ಬೆಳೆಯುವದರಿಂದ ಕೀಟಗಳ ಬಾಧೆಯಿಂದ ತಪ್ಪಿಸಬಹುದು ಎಂದು ಹೇಳಿದರು.
ಶೇಂಗಾ ಬಿತ್ತನೆ ಮಾಡಿ ಒಂದು ತಿಂಗಳ ಅವಧಿಯಲ್ಲಿ ಸಸ್ಯಗಳನ್ನು ಕೀಟಗಳು ಬಾಧಿಸುವುದರಿಂದ ಸಸ್ಯಗಳಿಗೆ ಹಾನಿಯಾಗುತ್ತದೆ, ಆದ್ದರಿಂದ ಯಾವುದೇ ಬೆಳೆಗಳಾಗಲಿ ಬೀಜೊಪಚಾರ ಮಾಡಿ ಬಿತ್ತನೆ ಮಾಡಬೇಕುಎಂದು ಹೇಳಿದ ಅವರು, ರೈತರು ಜಮೀನಿನಲ್ಲಿ ಪ್ರತಿವರ್ಷ ಒಂದೇ ಬೆಳೆ ಬೆಳೆಯುವ ಪದ್ಧತಿಯನ್ನು ಕೈಬಿಟ್ಟು ಬೇರೆ ಬೇರೆ ಬಗೆಯ ಬೆಳೆಗಳನ್ನು ಬೆಳೆಯುದರಿಂದ ರೋಗ ಬಾಧೆ ಕಡಿಮೆ ಆಗುತ್ತದೆ ಎನ್ನುವದನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿರಹಟ್ಟಿಯ ಕೃಷಿ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ, ರೈತರಿಗೆ ಸಲಹೆಗಳನ್ನು ನೀಡಿದರು. ಕೃಷಿಕ ಸಮಾಜ ನವದೆಹಲಿ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಖಿ, ಶಿವರಾಜಗೌಡ ಪಾಟೀಲ, ಬಸವರಾಜ ಸೊರಟೂರ, ಶಿವಪುತ್ರಪ್ಪ ತಾರೀಕೊಪ್ಪ, ಶಿದ್ದಪ್ಪ ದೊಡ್ಡಮನಿ, ಶಂಕರಗೌಡ ಪಾಟೀಲ, ರುದ್ರಪ್ಪ ಜವಳಿ ಸೇರಿದಂತೆ ಗ್ರಾಮದ ಅನೇಕ ರೈತರು ಇದ್ದರು.
ಏಕದಳ ಧಾನ್ಯ ಬಿತ್ತನೆ ಮಾಡಿ ತದನಂತರ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವುದರಿಂದ ಬೆಳೆದ ಎಲೆಗಳು ಭೂಮಿಯಲ್ಲಿ ಉದುರುತ್ತವೆ. ಭೂಮಿಯು ಫಲವತ್ತತೆಯೂ ಹೆಚ್ಚುತ್ತದೆ ಎಂದು ರೈತರಿಗೆ ಸಲಹೆ ನೀಡಿದ ಅವರು, ಶೇಂಗಾ ಬೆಳೆಗೆ ಕೀಟಬಾಧೆಯಿಂದ ರಕ್ಷಿಸಲು ಉಪಯೋಗಿಸಬಹುದಾದ ಕ್ರಮಗಳನ್ನು ತಿಳಿಸಿದರು.