ವಿಜಯಸಾಕ್ಷಿ ಸುದ್ದಿ, ಗದಗ: ಬೇಸಿಗೆಯ ಬಿಸಿಲಿನ ತಾಪಮಾನದಿಂದ ಚರ್ಮಕ್ಕೆ ಹಾನಿಯಾಗದಂತೆ ಸಂರಕ್ಷಣೆ, ಉಪಚಾರ ಹೊಂದಲು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಹೊಸ ಹೊಸ ಆವಿಷ್ಕಾರಗಳಾಗಿವೆ ಎಂದು ಚರ್ಮ ತಜ್ಞೆ ಡಾ. ಸರೋಜಾ ಪಾಟೀಲ ಹೇಳಿದರು.
ಅವರು ಗದಗ ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಗದಗ ಹಾಗೂ ಚರ್ಮರೋಗ ತಜ್ಞರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ (ಸಿ.ಎಂ.ಇ) ಕಾರ್ಯಕ್ರಮದಲ್ಲಿ ಸನ್ ಸ್ಕ್ರೀನ್ ವಿಷಯವಾಗಿ ಉಪನ್ಯಾಸ ನೀಡಿದರು.
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದವರು ತಜ್ಞ ವೈದ್ಯರ ಸಲಹೆ ಪಡೆದು ಕ್ರೀಮ್, ಲೋಷನ್ಗಳನ್ನು ಬಳಸಬೇಕು. ಚರ್ಮದ ಮೇಲೆ ಪರಿಣಾಮ ಬೀರುವಂತಿರಬಾರದು. ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿದ್ದಾಗ ತಲೆ, ಮುಖ ಇತರ ಅಂಗಗಾಂಗಗಳ ಮೇಲೆ ಹಾನಿ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಚರ್ಮ ರೋಗ ತಜ್ಞೆ ಡಾ. ಅಪೂರ್ವ ರೇಶ್ಮೆ ಅವರು ಮೊಡವೆಗಳ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ಹದಿಹರೆಯದ ಮತ್ತು ಮಧ್ಯ ವಯಸ್ಕರರಲ್ಲಿ ಮೊಡವೆಗಳ ನಿರ್ವಹಣೆ ಹಾಗೂ ಕೈಗೊಳ್ಳಬೇಕಾದ ಕ್ರಮ ಕುರಿತು ತಿಳಿಸಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಹಿರಿಯ ತಜ್ಞ ವೈದ್ಯರಾದ ಡಾ. ಗಿರೀಶ್ ನಾಗರಾಳ, ಡಾ. ಪ್ರಕಾಶ ಕೊಲೋಳಗಿ, ಕಾರ್ಯದರ್ಶಿ ಡಾ. ತುಕಾರಾಮ ಸೋರಿ, ಡಾ. ಬಿಡಿನಹಾಳ, ಡಾ. ಪ್ರಶಾಂತಕುಮಾರ ದೇಸಾಯಿ ಅವರು ಚರ್ಚೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಕೋವಿಡ್ದಲ್ಲಿ ನಿಧನರಾದ ವೈದ್ಯರಿಗೆ ಮೇಣಬತ್ತಿ ಬೆಳಗುವ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಡಾ. ಬಿಡಿನಹಾಳರು ಕೋವಿಡ್ ಸಂದರ್ಭದಲ್ಲಿ ವೈದ್ಯರ ಸೇವೆಯನ್ನು ಶ್ಲಾಘಿಸಿ ನಿಧನರಾದ ವೈದ್ಯರ ಗುಣಗಾನ ಮಾಡಿ ಮಾತನಾಡಿದರು. ಡಾ. ಕರೂರ ಅವರ ನೆನಪಿನಲ್ಲಿ ಡಾ. ಸೋನಿಯಾ ಕರೂರ ಅವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಡಾ. ತುಕಾರಾಮ ಸೋರಿ ನಿರೂಪಿಸಿ ವಂದಿಸಿದರು.