ಬಳ್ಳಾರಿ:- ಆಧುನಿಕತೆ ಎಷ್ಟೇ ಬೆಳೆದರೂ ನಮ್ಮಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆಯೇ ಎಂಬ ಸಂದೇಹ ಮೂಡುತ್ತಿದೆ. ಇಲ್ಲೊಬ್ಬ ಯುವತಿಯನ್ನು ಪೋಷಕರು ದೇವದಾಸಿ ಎಂಬ ಅನಿಷ್ಟ ಪದ್ಧತಿಗೆ ದೂಡುತ್ತಿರುವುದನ್ನು ಪೊಲೀಸರು ತಪ್ಪಿಸಿದ್ದಾರೆ.
ಹೌದು, ಕುಟುಂಬಸ್ಥರಿಂದಲೇ ದೇವದಾಸಿ ಪದ್ಧತಿಗೆ ದೂಡಲಾಗುತ್ತಿದ್ದ ಯುವತಿಯನ್ನು ರಕ್ಷಿಸಿರುವ ಪೊಲೀಸರು, ಆಕೆ ಪ್ರೀತಿಸಿದ್ದ ಯುವಕನ ಜೊತೆಗೆ ವಿವಾಹ ಮಾಡಿಸಿದ್ದಾರೆ. ಯುವತಿ ತನ್ನದೇ ಯುವಕನನ್ನು ಪ್ರೀತಿಸುತ್ತಿದ್ದರು. ವಿಷಯ ತಿಳಿದ ಯುವತಿಯ ತಾಯಿ ಪ್ರೀತಿಯನ್ನು ವಿರೋಧಿಸಿ ದೇವದಾಸಿ ಆಗುವಂತೆ ನಿತ್ಯ ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪದ ಯುವತಿ ಪುನರ್ವಸತಿ ಕಲ್ಪಿತ ದೇವದಾಸಿಯರ ವಿಮೋಚನಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಚ್.ಯಂಕಮ್ಮ ಅವರನ್ನು ಸಂಪರ್ಕಿಸಿದ್ದರು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕುರುಗೋಡು ಠಾಣೆಯ ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಅವರು ಯುವತಿ ಮತ್ತು ಯುವಕನ ಕುಟುಂಬದವರನ್ನು ಠಾಣೆಗೆ ಕರೆಯಿಸಿ ದೇವದಾಸಿ ಪದ್ಧತಿಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿ ಮನವೊಲಿಸಿದ್ದಾರೆ. ಎಲ್ಲರ ಸಮ್ಮುಖದಲ್ಲಿಯೇ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿವಾಹ ಮಾಡಿಸಲಾಗಿದೆ. ಈ ಕುರಿತು ಸುಪ್ರಿತ್ ವಿರೂಪಾಕ್ಷಪ್ಪ, ‘ದೇವದಾಸಿ ಪದ್ಧತಿಗೆ ದೂಡುವ ಪ್ರಕರಣ ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದ್ದಾರೆ.