ವಿಜಯಸಾಕ್ಷಿ ಸುದ್ದಿ, ರೋಣ: ಕೂಸಿನ ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಭೇದ-ಭಾವ ಮಾಡದೇ ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಂದು ರೋಣ ತಾ.ಪಂ ವ್ಯವಸ್ಥಾಪಕ ದೇವರಾಜ್ ಸಜ್ಜನಶೆಟ್ಟರ ಅಭಿಮತ ವ್ಯಕ್ತಪಡಿಸಿದರು.
ರೋಣ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರದಿAದ 7 ದಿನಗಳ ಕಾಲ ಕೂಸಿನ ಮನೆ ಆರೈಕೆದಾರರ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಐ.ಆರ್.ಡಿ ಮೈಸೂರು ಸಂಸ್ಥೆಯ ಬೋಧಕರಾದ ಮಲ್ಲಿಕಾರ್ಜುನ ಸ್ವಾಮಿ, ಕೂಸಿನ ಮನೆಯ ಆರೈಕೆದಾರರು ಕೇವಲ ವೇತನಕ್ಕಾಗಿ ದುಡಿಯದೇ ಮಕ್ಕಳ ಸೇವೆಯನ್ನು ಮಾಡುತ್ತಿದ್ದೇವೆಂದು ತಿಳಿದು ಕೆಲಸ ಮಾಡಬೇಕು. ಅಲ್ಲದೆ ನರೇಗಾ ಕೂಲಿಕಾರರ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯವನ್ನು ಆರೈಕೆದಾರರು ಮಾಡಬೇಕು. ಆತ್ಮವಿಶ್ವಾಸದಿಂದ ಕೂಸಿನ ಮನೆಯನ್ನು ಆರೈಕೆದಾರರು ನಿರ್ವಹಿಸಬೇಕು. ಗ್ರಾಮಸ್ಥರ ಮತ್ತು ನರೇಗಾ ಕೂಲಿಕಾರರಲ್ಲಿ ಕೂಸಿನ ಮನೆಯ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಿದ್ದೇ ಆದಲ್ಲಿ ಕೂಸಿನ ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು.
. ಸಂಪನ್ಮೂಲ ವ್ಯಕ್ತಿಗಳಾದ ಲಲಿತಾ ಎಸ್.ಅಳವಂಡಿ, ಸರೋಜ ಬಡಿಗೇರ, ತಾಲೂಕಾ ಸಂಯೋಜಕ ಶರಣಪ್ಪ ಕೊತಬಾಳ, ವಿಷಯ ನಿರ್ವಾಹಕ ಎಚ್.ಕೆ. ದೇಸಾಯಿ ಉಪಸ್ಥಿತರಿದ್ದರು. ರೋಣ, ನರಗುಂದ ಹಾಗೂ ಗಜೇಂದ್ರಗಡ ತಾಲೂಕಿನ ಕೂಸಿನ ಮನೆಗಳ ಆರೈಕೆದಾರರು ತರಬೇತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ತರಬೇತಿ ಪಡೆದಿರುವ ಕೂಸಿನ ಮನೆಯ ಆರೈಕೆದಾರರು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸಬೇಕು. ಕೂಸಿನ ಮನೆಯಲ್ಲಿ ಮಕ್ಕಳ ಸುರಕ್ಷತೆ ಜೊತೆಗೆ ಮಕ್ಕಳ ಪಾಲಕರಲ್ಲೂ ಕೂಸಿನ ಮನೆಯ ಕಾರ್ಯಕ್ಷಮತೆಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಆರೈಕೆದಾರರು ಮಾಡಬೇಕು ಎಂದು ದೇವರಾಜ್ ಸಜ್ಜನಶೆಟ್ಟರ ತಿಳಿಸಿದರು.