ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ರಾಜ್ಯಕ್ಕೆ ನಾಮಕರಣ ಸೇರಿದಂತೆ ಅನೇಕ ಮಹತ್ವದ ಘಟ್ಟಗಳನ್ನು ನಿರ್ಮಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಸಾಮಾಜಿಕ ತಾರತಮ್ಯಗಳನ್ನು ನಿವಾರಿಸಿ, ಸಮಾಜದ ಸರ್ವರಿಗೂ ನ್ಯಾಯ, ಅವಕಾಶಗಳಲ್ಲಿ ಸಮಾನತೆಯನ್ನು ತರಲು ನಿರಂತರವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರರಾಗಿ ದೇವರಾಜ ಅರಸು ಅವರು ಇತಿಹಾಸದಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಬುಧವಾರ ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯಯುತವಾದ ಅವಕಾಶಗಳು ಮತ್ತು ಸೌಲಭ್ಯಗಳು ದೊರೆಯಲು ಡಿ.ದೇವರಾಜ ಅರಸು ಅವರ ಕೊಡುಗೆ ಮುಖ್ಯವಾಗಿದೆ. ಅವರ ಆಡಳಿತ ಅವಧಿಯಲ್ಲಿ ಆಯೋಗಗಳ ರಚನೆ, ಕರ್ನಾಟಕ ನಾಮಕರಣ ಸೇರಿದಂತೆ ಅನೇಕ ಮಹತ್ವದ ಕಾರ್ಯಗಳಾಗಿವೆ. ಇಂದಿನ ವ್ಯವಸ್ಥೆಯ ಬದಲಾವಣೆಗೆ ಅವರ ಚಿಂತನೆಗಳು, ಸುಧಾರಣೆಗಳು ಮತ್ತು ಆಡಳಿತಾತ್ಮಕ ಕ್ರಮಗಳು ಅಗತ್ಯವಾಗಿವೆ. ಡಿ. ದೇವರಾಜ ಅರಸು ಅವರು ಹುಟ್ಟಿ 110 ವರ್ಷ ಆದರೂ ಅವರನ್ನು ನಾವು ನೆನಪಿಸುತ್ತೇವೆ. ಇದಕ್ಕೆ ಕಾರಣ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳಾಗಿವೆ ಎಂದರು.
ಪ್ರೊ. ಶಶಿಧರ ತೊಡಕರ ಹಾಗೂ ಪಾಲಿಕೆಯ ಮಾಜಿ ಮಹಾಪೌರ ಹಾಗೂ ಹಾಲಿ ಸದಸ್ಯ ವಿರೇಶ ಅಂಚಟಗೇರಿ ಅವರು ಡಿ. ದೇವರಾಜ ಅರಸು ಅವರ ಕುರಿತು ಮಾತನಾಡಿದರು.
ಗೋಟಗೋಡಿ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಮುಖ್ಯಸ್ಥ ಡಾ. ವೆಂಕನಗೌಡ ಪಾಟೀಲ ಅವರು ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭಾನುಮತಿ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಪಾಟೀಲ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮಾಜದ ಸದಸ್ಯ ಗುರುನಾಥ ಹುಲ್ಲೂರ, ಜಿಲ್ಲಾಧ್ಯಕ್ಷ ಪರಶುರಾಮ ಚುರುಮುರಿ, ಉಪಾಧ್ಯಕ್ಷ ರಾಜು, ಗ್ರಾ.ಪಂ ಅಧ್ಯಕ್ಷ ಭೀಮಪ್ಪ, ಕರ್ನಾಟಕ ರಾಜ್ಯ ಹಿಂದುಳಿದ ಅಲೆಮಾರಿ ಸಮಾಜದ ಉಪಾಧ್ಯಕ್ಷ ಪ್ರಕಾಶ ಬಿಲಾನಾ, ಪಾಲಿಕೆಯ ಮಾಜಿ ಸದಸ್ಯ ಆನಂದ ಸಿಂಗನಾಥ, ಸಮಾಜದ ಮುಖಂಡ ವಸಂತ ಅರ್ಕಾಚಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮಾತನಾಡಿ, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಚಿಂತನೆಗೆ ಬುನಾದಿ ಹಾಕಿದವರು ಡಿ. ದೇವರಾಜ ಅರಸು ಅವರು. ಅವರ ಕಾಲದಲ್ಲಿ ಜಾರಿಗೆ ತಂದ ವಿವಿಧ ಕಲ್ಯಾಣ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.


