ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಅವರು ಎಲ್ಲರೊಂದಿಗೂ ಸ್ಪರ್ಧಿಸಿ ಗೆಲ್ಲುವ ಶಕ್ತಿಯನ್ನು ಹೊಂದಿದ್ದಾರೆ. ಈ ಶಕ್ತಿಯನ್ನು ಬಳಸಿಕೊಂಡು ಭವಿಷ್ಯದಲ್ಲಿ ಉನ್ನತ ವ್ಯಕ್ತಿತವವನ್ನು ಬೆಳೆಸಿಕೊಳ್ಳಬೇಕೆಂದು ಎಸ್ಎವಿವಿಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಪಟ್ಟಣದ ಎಸ್ಎವಿವಿಪಿ ಬಾಲಿಕೆಯರ ಪ್ರೌಢಶಾಲೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಇಂದು ರಾಷ್ಟ್ರೀಯ ಮತ್ತು ಅಂರಾರಾಷ್ಟ್ರೀಯ ಮಟ್ಟದ ಎಲ್ಲ ವಿಭಾಗಗಳಲ್ಲಿ ಹೆಸರು ಮಾಡಿದ್ದಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆ ತರುವ ವಿಚಾರ. ನಾಲ್ಕು ಗೋಡೆಗಳೊಳಗೆ, ಹೊಸ್ತಿಲು ದಾಟದೆ ಇದ್ದ ಮಹಿಳೆ ಈಗ ವಿಶ್ವವ್ಯಾಪಿಯಾಗಿ ಬೆಳೆದಿರುವುದು ನಿಮಗೆಲ್ಲ ಮಾದರಿಯಾಗಬೇಕೆಂದು ದೊಡ್ಡಮೇಟಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಚೇರಮನ್ ವೀರಣ್ಣ ಹಳ್ಳಿ ಮಾತನಾಡಿ, ಜೀವನದಲ್ಲಿ ನೀವೆಂದಿಗೂ ಹಿಂಜರಿಕೆ ಹೊಂದಬೇಡಿ. ಧೈರ್ಯದಿಂದ ಮುನ್ನುಗ್ಗುವುದನ್ನು ಕಲಿಯಿರಿ. ಬರುವ ಪರೀಕ್ಷೆಗಳನ್ನೂ ಸಹ ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ, ಊರಿಗೆ, ನಿಮ್ಮ ಮನೆತನಕ್ಕೆ ಹೆಸರು ತನ್ನಿರಿ ಎಂದರು.
ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮಧುಶ್ರೀ ಬಿಲೆಕೇರಿ, ಶ್ರೇಯಾ ಬಿಸನಳ್ಳಿ, ಚೇತನಾ ಬೇವಿನಕಟ್ಟಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಸರೋಜಾ ಧರ್ಮಾಯತ ವರದಿ ವಾಚಿಸಿದರು. ದಾನಿ ಗೋಪಾಲ ಬಿಲೆಕೇರಿಯವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯ ಆರ್.ಜಿ. ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಷಣ್ಮುಖಪ್ಪ ಸಿದ್ನೇಕೊಪ್ಪ, ಉಚಿತ ಪ್ರಸಾದ ನಿಲಯದ ಚೇರಮನ್ ಮಲ್ಲಿಕಾರ್ಜುನಪ್ಪ ಮೆಣಸಿಗಿ, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಎಂ.ಎಸ್. ಅತ್ತಾರ ವಂದಿಸಿದರು.