ವಿಜಯಸಾಕ್ಷಿ ಸುದ್ದಿ, ಗದಗ: ಮಾನವೀಯ ಮೌಲ್ಯಗಳನ್ನ, ಸಮಾಜದಲ್ಲಿ ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಬೋಧಿಸುವ ಲಾವಣಿ ಹಾಗೂ ಗೀಗೀ ಪದಗಳ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಇಂದಿನ ಯುವ ಕಲಾವಿದರು ನಮ್ಮ ನಾಡಿನ ಮೂಲ ಕಲೆಗಳಲ್ಲೊಂದಾದ ಲಾವಣಿ ಹಾಗೂ ಗೀಗೀ ಪದ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಂಸ್ಕೃತಿಕ ಸಂಘಟಕ ಹಾಗೂ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಹೇಳಿದರು.
ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ನ ಜ.ತೋಂಟದಾರ್ಯ ಕನ್ನಡ ಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಮ್ಮಿಕೊಳ್ಳಲಿರುವ ಲಾವಣಿ ಹಾಗೂ ಗೀಗೀ ಪದಗಳ ತರಬೇತಿ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಚಿತ ವಸತಿ, ಊಟೋಪಚಾರದೊಂದಿಗೆ ನೀಡಲಿರುವ ಲಾವಣಿ ಹಾಗೂ ಗೀಗೀ ಪದಗಳ ತರಬೇತಿ ಶಿಬಿರದಲ್ಲಿ ಉದಯೋನ್ಮುಖ ಕಲಾವಿದರು ತರಬೇತಿ ಪಡೆದು, ತಂಡಗಳನ್ನು ಕಟ್ಟಿಕೊಂಡು ಕಲೆಯನ್ನು ಉಳಿಸಿ-ಬೆಳೆಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ತರಬೇತಿ ಯಶಸ್ವಿಗೊಳಿಸೋಣ ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರು ಹಾಗೂ ಹಿರಿಯ ಕಲಾವಿದರಾದ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ಅಕಾಡೆಮಿಯಿಂದ ಉದಯೋನ್ಮುಖ ಕಲಾವಿದರಿಗೆ ಲಾವಣಿ, ಗೀಗೀ ಪದಗಳ ತರಬೇತಿ ನೀಡುವ ಒಂದು ಒಳ್ಳೆಯ ಅವಕಾಶ ಒದಗಿದ್ದು, ಎಲ್ಲರ ಸಹಕಾರದಿಂದ ಈ ಕಾರ್ಯ ಯಶಸ್ವಿಗೊಳಿಸೊಣ ಎಂದರು.
ಹಿರಿಯ ಸಾಂಸ್ಕೃತಿಕ ಸಂಘಟಕರು ಹಾಗೂ ಕೀರ್ತನಕಾರರಾದ ಚನ್ನವೀರಯ್ಯ ಕಡಣಿ ಶಾಸ್ತಿçÃಗಳು, ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ, ಪತ್ರಕರ್ತ ಹಾಗೂ ಹವ್ಯಾಸಿ ರಂಗಕಲಾವಿದ ಮೌನೇಶ ಸಿ.ಬಡಿಗೇರ(ನರೇಗಲ್ಲ), ಗ್ರಾಮೀಣ ವಿ.ವಿಯ ಉಪನ್ಯಾಸಕರಾದ ಚಂದ್ರಪ್ಪ ಬಾರಂಗಿ, ನಟರಂಗದ ಸೋಮು ಚಿಕ್ಕಮಠ, ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಕೇರಿಮಠ, ಕಲಾವಿದರಾದ ಬಸವರಾಜ ಹಡಗಲಿ ಲಕ್ಕುಂಡಿ, ಅಡವಿಸೋಮಾಪುರದ ವೀರಣ್ಣ ಅಂಗಡಿ, ಮೆಣಸಗಿಯ ನಿಂಗಬಸಪ್ಪ ದಿಂಡೂರ, ಕಿರಟಗೇರಿಯ ಬಸವರಾಜ ಹಾಲನ್ನವರ, ಲಕ್ಕುಂಡಿಯ ಶಿವ ಭಜೆಂತ್ರಿ, ಮಂಜುನಾಥ ಒಂಟೆತ್ತಿನ ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆಗಳನ್ನು ನೀಡಿದರು.
ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ತರಬೇತಿ ಹಾಗೂ ವಿಚಾರ ಸಂಕಿರಣದೊಂದಿಗೆ ಜಿಲ್ಲೆಯ ಗ್ರಾಮೀಣ ಸ್ಥಳವೊಂದರಲ್ಲಿ ಗೀಗೀ ಪದ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾನಪದ ವಾತಾವರಣ ನಿರ್ಮಾಣ ಮಾಡೋಣ ಎಂದು ಸಲಹೇ ನೀಡಿದರು.


