ತೋಟಗಾರಿಕಾ ವಿ.ವಿ ಆದಲ್ಲಿ ಅಭಿವೃದ್ಧಿ ಸಾಧ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆಗೆ ಹೋಬಳಿಯ ಗ್ರಾಮಗಳಾದ ಡಂಬಳ, ಹಿರೇವಡ್ಡಟ್ಟಿ, ಮೇವುಂಡಿ ಬರದೂರ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಅಗತ್ಯ ಜಮೀನು ಗುರುತಿಸಲಾಗಿದೆ. ಬಾಗಲಕೋಟಿ ತೋಟಗಾರಿಕಾ ವಿಶ್ವವಿದ್ಯಾಲಯ ಸಂಪೂರ್ಣ ತಂಡ ಇಲ್ಲಿಗೆ ಆಗಮಿಸಿ ಸರ್ಕಾರಕ್ಕೆ ಪೂರಕ ವರದಿ ಸಲ್ಲಿಸಿದೆ. ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯ ಅವರು ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಆಶಾಭಾವನೆ ಇದೆ ಎಂದು ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಡಂಬಳ ಹೋಬಳಿಯ ಡಂಬಳ ಹಿರೇವಡ್ಡಟ್ಟಿ ಗ್ರಾಮದ ಭಾಗದಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆಯಾಗುವ ಸ್ಥಳ ವೀಕ್ಷಣೆ ಮಾಡಿದ ನಂತರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಲಿಂ.ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ತೋಟಗಾರಿಕೆ ಬೆಳೆಗಳನ್ನು ತಾವೇ ಬೆಳೆದು ಈ ಭಾಗದ ರೈತರಿಗೆ ಪ್ರೇರಣೆಯಾಗಿದ್ದರು. ಈ ಭಾಗದಲ್ಲಿ ರೈತರು ಪೈರಲ್, ಡ್ರ‍್ಯಾಗನ್, ತೆಂಗು, ಅಡಕೆ, 650 ಹೇಕ್ಟರ್ ಬಾಳೆ ಬೆಳೆಯಲು ಪ್ರೋತ್ಸಾಹ ನೀಡಲಾಗಿದೆ. ಮಹಾವಿದ್ಯಾಲಯ ಸ್ಥಾಪನೆಯಾಗಬೇಕು ಎನ್ನುವದು ಸಹ ಶ್ರೀಗಳ ಕನಸಾಗಿತ್ತು. ಮಹಾವಿದ್ಯಾಲಯ ಸ್ಥಾಪನೆಯಾದರೆ ಗ್ರಾಮೀಣ ಭಾಗದ ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ, ಈ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ರೈತರು ಆರ್ಥಿಕ ಮುಖ್ಯ ಪ್ರವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಯುವಕರಿಗೆ ಉದ್ಯೋಗ, ರೈತರು ಆಧುನಿಕ ಮಾದರಿಯ ತಾಂತ್ರಿಕತೆಯ ಮೂಲಕ ಬೆಳೆ ಬೆಳೆಯಲು ಸಾಧ್ಯವಾಗಲಿದೆ. ರೈತರು ಹಾಗೂ ಸಾರ್ವಜನಿಕರಿಗೆ ಮಹಾವಿದ್ಯಾಲಯದ ಪರಿಕಲ್ಪನೆ, ತಿಳುವಳಿಕೆ ಮೂಡಬೇಕಂದು ಸಲಹೆ ನೀಡಿದರು.

ಶಿಂಗಟಾಲೂರ ಏತ ನೀರಾವರಿ ಯೋಜನೆ ಈ ಭಾಗದ ಜನರಿಗೆ ಕಲ್ಪವೃಕ್ಷವಿದ್ದಂತೆ. ಡಂಬಳ, ಮುರಡಿ, ತಾಮ್ರಗುಂಡಿ, ಹಿರೇವಡ್ಡಟ್ಟಿ, ಜಂತ್ಲಿಶಿರೂರ, ಪೇಠಾ ಆಲೂರ ಗ್ರಾಮಗಳ ಕೆರೆಗಳಲ್ಲಿ ವರ್ಷಪೂರ್ತಿ ನೀರು ಲಭ್ಯವಿರುವದರಿಂದ ಮಹಾವಿದ್ಯಾಲಯಕ್ಕೆ ಸಹಕಾರಿಯಾಗಲಿದೆ. ಜಾಲವಾಡಗಿ ಏತನೀರಾವರಿ ಯೋಜನೆಗೆ 198 ಕೋಟಿ ರೂ ಮರು ಟೆಂಡರ್ ಕರೆಯಲಾಗಿದ್ದು, ಈ ಯೋಜನೆಯಿಂದ ಸಾಕಷ್ಟು ಗ್ರಾಮಗಳ ಕೆರೆಗಳು ಭರ್ತಿಯಾಗುವದರೊಂದಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಪಿ.ಎಸ್. ಎರಿಸ್ವಾಮಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಹಿರಿಯ ಮುಖಂಡ ವಿ.ಆರ್. ಗುಡಿಸಾಗರ, ಮುಖಂಡರಾದ ಬಸವರಾಜ ನವಲಗುಂದ, ಈಶುಫ ಇಟಗಿ, ಗೋಣಿಬಸಪ್ಪ ಕೊರ್ಲಹಳ್ಳಿ, ಅಬ್ದುಲ್ ಕಲಿಕೇರಿ, ಬಸವರಡ್ಡಿ ಬಂಡಿಹಾಳ, ಸುರೇಶ ಗಡಗಿ, ಬಾಬುಸಾಬ್ ಮೂಲಿಮನಿ ಇದ್ದರು.

ಕ್ಷೇತ್ರದ ಶಾಸಕನಾಗಿ ಈ ಭಾಗದ ಜನರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಮಾಡುತ್ತೇನೆ. ಈ ಅವದಿಯಲ್ಲಿಯೇ ರೈತರ, ಶೈಕ್ಷಣಿಕ, ಕಾರ್ಮಿಕರ, ಯುವಕರ ಹಿತಕ್ಕಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಅವುಗಳನ್ನು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳಿಸುತ್ತೇನೆ ಎನ್ನುವ ಸಂಕಲ್ಪ ಹೊಂದಿದ್ದೇನೆ ಎಂದು ಶಾಸಕ ಜಿ.ಎಸ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here