ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಮಠದಿಂದ ಜರುಗುವ ಸಾಂಪ್ರಾದಾಯಿಕ ಕಾರ್ಯಕ್ರಮಗಳಲ್ಲೊಂದಾದ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮವು ಕಾರ್ಯಕ್ರಮವು ಸೋಮವಾರ ಸಂಜೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ಜರುಗಿತು.
ಧಾರವಾಡದ ಹೆಸರಾಂತ ಕಲಾವಿದರಾದ ಎಸ್.ಎಸ್. ಹಿರೇಮಠ ಸಂಗಡಿಗರು ಮತ್ತು ಹರ್ಲಾಪೂರದ ಸಿ.ವಿ ಸಿ.ಡಿ ಕಲಾ ತಂಡದವವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಶ್ರೀ ಮಠದ ಸಂಪ್ರದಾಯದಂತೆ ಗಂಗಾರತಿ ಜರುಗಿತು. ನಂತರ ಗುಜಮಾಗಡಿ ಗ್ರಾಮದ ಈಶ್ವರಯ್ಯ ಮತ್ತು ಶಂಕ್ರಮ್ಮ ಹಿರೇಮಠ ಹಾಗೂ ಮನ್ನಾಪುರ ಗ್ರಾಮದವರಾದ ಈಶ್ವರಯ್ಯ ಸುನಂದ ಹಿರೇಮಠ ದಂಪತಿಗಳು ಸಂಕಲ್ಪ ಪೂಜೆ ನೆರವೇರಿಸಿ, ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.
ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತಂದು ಮೂಹೂರ್ತಗೊಳಿಸಲಾಯಿತು. ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಹಗ್ಗದ ಮೂಲಕ ಹಾಗೂ ನಾವಿಕರ ಸಹಾಯದಿಂದ ಹುಟ್ಟು ಹಾಕಿ ಎರಡು ಸುತ್ತು ಪ್ರದಕ್ಷಿಣೆಯನ್ನು ಹಾಕಲಾಯಿತು. ಪ್ರದಕ್ಷಿಣೆ ಸಂದರ್ಭದಲ್ಲಿ ಶಕುಂತಲಾ ಭಿನ್ನಾಳ ಹಾಗೂ ಸಂಗಡಿಗರಿಂದ ಶ್ರೀ ಗವಿಮಠಾಧೀಶ ಮಂಗಳ ಗೀತೆಯ ಸಂಗೀತ ಕಾರ್ಯಕ್ರಮ ಜರುಗಿತು. ಬಳಗಾನೂರಿನ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು, ಬಿಜಕಲ್ನ ಶಿವಶಾಂತವೀರ ಶರಣರು, ಗುಲಗಂಜಿ ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಬೂದಿಹೊಸಳ್ಳಿಯ ಶ್ರೀ ಭೂದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಜಾತ್ರಾ ಮಹೋತ್ಸವದಲ್ಲಿ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ. ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕತೃ ಗವಿಶಿದ್ಧೇಶನನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ. ತೆಪ್ಪೋತ್ಸವ ಎಂದರೆ ಬಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವವೆಂದು ಅರ್ಥ. ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತಂದು ಮೂಹೂರ್ತಗೊಳಿಸಿದ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಸಾಗಿಸುತ್ತಾರೆ.