ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಯೋಗಿರಾಜರ ಆರಾಧನಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾಯಕಿ ಗೌರಿ ಅರುಣ ಕುಲಕರ್ಣಿ ಹಾಗೂ ಯುವ ಗಾಯಕಿ ಅರ್ಪಿತಾ ಜಹಗೀರದಾರ ಅವರು ತಮ್ಮ ಸುಮಧುರ ಕಂಠದಿಂದ ಹಾಡಿದ ಭಕ್ತಿ ಗೀತೆಗಳು ಸೇರಿದ ನೂರಾರು ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತು.
ಗೌರಿ ಅವರು ತಾವೇ ರಚಿಸಿದ ದತ್ತಾತ್ರೇಯ ಸ್ವಾಮಿಯ ದತ್ತ ಮನೆಗೆ ಬಂದ, ಯೋಗಿರಾಜ ಮಹಾರಾಜರ ಜೀವನ ಚರಿತ್ರೆಯ ಸಾಧನೆಯ ಹಾಡು, ರಾಮ ಭಜನೆಯ ಮಾಡೋ ಮನುಜ ಹಾಗೂ ಅರ್ಪಿತಾ ಹಾಡಿದ ಸುಂದರಿ ಬಂದಾಳೋ ನೋಡಾ, ಹರಿ ರಮಣಾ ಗೋವಿಂದ ಸೇರಿದಂತೆ ಹತ್ತಕ್ಕೂ ಹೆಚ್ಚು ಭಕ್ತಿ ಹಾಡುಗಳು ಮನ ಸೆಳೆದವು. ಗದಗ ಕರಿಯಮ್ಮಕಲ್ಲು ಬಡಾವಣೆಯ ಶ್ರೀಕರಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಶ್ರೀಕಾಂತ ಹೂಲಿ ಅವರ ಭಕ್ತಿ ಸಂಗೀತದ ಹಾಡುಗಳು ಭಕ್ತರನ್ನು ಭಕ್ತ ಪರವಶನ್ನಾಗಿಸಿತು.
ಇವರಿಗೆ ಉಮೇಶ ಪಾಟೀಲ ಹಾಗೂ ಹನುಮಂತಪ್ಪ ಹೆಬ್ಬಳ್ಳಿ ಅವರು ಸಂಗೀತ ಸೇವೆ ನೀಡಿದರು. ಸಂಪ್ರದಾಯದಂತೆ ಸಂಜೆ ಗುರುವಿನಹಳ್ಳಿಯ ವಿಶ್ವನಾಥ ಕುಲಕರ್ಣಿಯವರಿಂದ ಕೃಷ್ಣನ ಸಂಧಾನ ಕುರಿತು ಗಮಕ ವಾಚನ ಮತ್ತು ಕೀರ್ತನ ಕೇಸರಿ ದಿಗಂಬರಶಾಸ್ತ್ರಿಗಳಿಂದ ಕೀರ್ತನೆ ನೆರವೇರಿತು.
ಬೆಳಿಗ್ಗೆ ವಿದ್ಯಾಶಂಕರ ದೇವರು ಹಾಗೂ ಯೋಗಿರಾಜರಿಗೆ ಲಘು ಅಭಿಷೇಕ ನಡೆಯಿತು. ಕಾಕಡಾರತಿಯೊಂದಿಗೆ ಮಧ್ಯಾಹ್ನ ಆರಾಧನಾ ಬ್ರಾಹ್ಮಣರಿಂದ ಅಲಂಕಾರ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.


