ವಿಜಯಸಾಕ್ಷಿ ಸುದ್ದಿ, ಗದಗ : 2022ರ ಜುಲೈ 1ರಿಂದ 2024ರ ಜುಲೈ 31ರ ಅವಯಲ್ಲಿ ನಿವೃತ್ತರಾದವರಿಗೆ ಗಳಿಕೆ ರಜೆ ನಗದೀಕರಣ, ಡಿಸಿಆರ್ಜೆ, ಕಮ್ಯುಟೇಶನ್ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರ ನೀಡಬೇಕು ಎಂದು ಒತ್ತಾಯಿಸಿ, ಅಕ್ಟೋಬರ್ 1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಜಿಲ್ಲಾ ಸಂಚಾಲಕ ಶಂಕರ ಹೂಗಾರ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಗೆ ಸಂಬಂಧಿಸಿ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲಾಗಿದೆ.
ಮುಂದುವರೆದು, ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಧರಣಿ ನಡೆಸಲಿದ್ದೇವೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಸ್.ಡಿ. ಕಡಿವಾಲ ಮಾತನಾಡಿ, 7ನೇ ವೇತನ ಆಯೋಗ 2022ರಲ್ಲಿಯೇ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. 2023ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಮಧ್ಯಂತರ ಪರಿಹಾರವನ್ನೂ ನೀಡಿದೆ. ಆದರೆ 2022 ಜುಲೈ 1ರಿಂದ 2024 ಜುಲೈ 31ರವರೆಗೆ ನಿವೃತ್ತರಾದವರಿಗೆ 6ನೇ ವೇತನ ಆಯೋಗದ ಮಾರ್ಗಸೂಚಿಯಂತೆ ಪಿಂಚಿಣಿ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿರುವ ಕ್ರಮ ಅಸಮಾಧಾನ ತರಿಸಿದೆ.
ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಲು ಹೋರಾಟ ನಡೆಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಐ.ಬಿ. ತಳವಾರ, ಎಸ್.ಎಸ್. ಕರಡಿ, ಎಸ್.ಎಂ. ಕಟ್ಟಿಮನಿ, ಶಂಕ್ರಪ್ಪ ಉಂಕಿ ಮುಂತಾದವರು ಉಪಸ್ಥಿತರಿದ್ದರು.
ಗದಗ ಜಿಲ್ಲೆಯಲ್ಲಿ ಸುಮಾರು 600 ಸೇರಿದಂತೆ ರಾಜ್ಯಾದ್ಯಂತ ಅಂದಾಜು 18 ಸಾವಿರ ನಿವೃತ್ತ ನೌಕರರು 7ನೇ ವೇತನ ಆಯೋಗದಂತೆ ಪಿಂಚಣಿ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈಗಾಗಲೇ 7ನೇ ವೇತನ ಆಯೋಗದ ಶಿಫಾರಸಿನಂತೆ ಮಧ್ಯಂತರ ಪರಿಹಾರ ಪಡೆದಿರುವ ಕಾರಣ, ನಮಗೂ 7ನೇ ವೇತನ ಆಯೋಗದ ಶಿಫಾರಸು ಅನ್ವಯವಾಗಬೇಕು ಎಂದು ಎಸ್.ಡಿ. ಕಡಿವಾಲ ಹೇಳಿದರು.