ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ೨೦೦೬ರ ಪೂರ್ವ ಸೇವೆಗೆ ಸೇರಿ ನಂತರದಲ್ಲಿ ಅನುದಾನಕ್ಕೊಳಪಟ್ಟಿರುವ ಮತ್ತು ಅನುದಾನಿತ ಶಾಲೆ-ಕಾಲೇಜುಗಳಲ್ಲಿ ೨೦೦೬ರ ಬಳಿಕ ಸೇವೆಗೆ ಸೇರಿ ಅನುದಾನಕ್ಕೊಳಪಟ್ಟಿರುವ ನೌಕರರಿಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ಹಳೆಯ ನಿಶ್ಚಿತ ಪಿಂಚಣಿ (ಓ.ಪಿ.ಎಸ್.) ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನಿತ ಶಾಲೆ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಹಾಗೂ ರಾಜ್ಯದ ಎಲ್ಲ ಅನುದಾನಿತ ಶಾಲಾ-ಕಾಲೇಜುಗಳ ನೌಕರ ಸಂಘಟನೆಗಳ ಸಹಯೋಗದಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ವೇಳೆ ಡಿ.೧೭ರಂದು ಸಾವಿರಾರು ನೌಕರರು ಸೇರಿ ಬೃಹತ್ ಹೋರಾಟ ನಡೆಸುವ ಮೂಲಕ ಸರಕಾರಕ್ಕೆ ಅಂತಿಮ ಗಡುವು ನೀಡಲು ನಿರ್ಧರಿಸಿದ್ದಾರೆ.
ಶನಿವಾರ ನಗರದ ಭೂಮರಡ್ಡಿ ಸರ್ಕಲ್ನಲ್ಲಿರುವ ಶ್ರೀ ಜಗದ್ಗುರು ತೋಂಟದಾರ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಈರಣ್ಣ ಹಾದಿಮನಿ, ಬಿ.ಎಸ್. ಬಸನಗೌಡ್ರ, ಉಮೇಶ ಹಿರೇಮಠ, ಬಸವರಾಜ ಕೊರ್ಲಹಳ್ಳಿ, ಧನೇಶ ನಾಯ್ಕ, ವಿ.ಎಲ್. ಗಿಂಡಿಮಠ, ವಾಯ್.ಎಮ್. ಖಾಜಿ, ಎಚ್.ಆರ್. ಓಲೆಕಾರ, ಶಶಿಧರ ಕುರಿ, ಮಂಜುನಾಥ ತೆಗ್ಗಿನಮನಿ, ಸೇರಿದಂತೆ ಗದಗ ಜಿಲ್ಲೆಯ ಪಿಂಚಿಣಿ ವಂಚಿತ ನೌಕರರು ಉಪಸ್ಥಿತರಿದ್ದರು.