ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟಿದ್ದ ನಟ ಧರ್ಮ ಕೀರ್ತಿರಾಜ್ 9ನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಈ 9 ವಾರಗಳ ಕಾಲ ತಮ್ಮ ಸೈಲೆಂಟ್ ನೇಚರ್ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದ ಧರ್ಮ ಕೀರ್ತಿರಾಜ್ ಆಟದಲ್ಲಾಗಲೀ, ಮನರಂಜನೆ ನೀಡುವುದರಲ್ಲಾಗಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಎಡವಿದ್ದರು. ಇದೀಗ ಧರ್ಮ ಕೀರ್ತಿರಾಜ್ ಬಿಗ್ಬಾಸ್ ಮನೆಯಿಂದ ಬೇಸರದ ಮನಸ್ಸಿನಿಂದಲೇ ಹೊರ ಬಂದಿದ್ದಾಋಎ.
ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಕ್ಷಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಧರ್ಮ ಕೀರ್ತಿರಾಜ್ ಮಾತ್ರ ಉಳಿದುಕೊಂಡಿದ್ದರು. ಇದಾದ ಬಳಿಕ ಕಿಚ್ಚ ಸುದೀಪ್ ಮನೆಯಿಂದ ಆಚೆ ಬರೋ ಸ್ಪರ್ಧಿ ಎಂದು ಧರ್ಮ ಕೀರ್ತಿರಾಜ್ ಅವರ ಹೆಸರು ಹೇಳಿದ್ದರು.
ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಹೇಳುತ್ತಿದ್ದಂತೆ ಎಲ್ಲಾ ಸ್ಪರ್ಧಿ ಬೇಸರಗೊಂಡರು. ಅಲ್ಲದೇ ಐಶ್ವರ್ಯ, ತ್ರಿವಿಕ್ರಮ್, ಭವ್ಯಾ ಗೌಡ ಕಣ್ಣೀರು ಹಾಕಿದ್ದಾರೆ. ಇದಾದ ಬಳಿಕ ಬಿಗ್ಬಾಸ್ ಮನೆಯಿಂದ ಆಚೆ ಬಂದು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿಯೂ ಧರ್ಮ ಅವರು ಬೇಸರ ಹೊರ ಹಾಕಿದ್ದಾರೆ.
ಈ ವಾರ ಧರ್ಮ ಕೀರ್ತಿರಾಜ್ ಅವರೇ ಹೊರಗೆ ಹೋಗುತ್ತಾರೆ ಎಂದು ವೀಕ್ಷಕರು ಕೂಡ ಊಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ಪ್ರೋಮೋದಲ್ಲಿ ಕೂಡ ಧರ್ಮ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದರೆ, ಅವರು ಹೈಲೈಟ್ ಆಗುವಂತಹ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಅವರು ಎಲಿಮಿನೇಟ್ ಆಗಿದ್ದರಲ್ಲಿ ಅಚ್ಚರಿ ಇಲ್ಲ ಎಂದು ವೀಕ್ಷಕರು ಹೇಳಿದ್ದಾರೆ.



