ವಿಜಯಸಾಕ್ಷಿ ಸುದ್ದಿ, ನ್ಯಾಮತಿ: ಸುಖ-ಶಾಂತಿಯ ಬದುಕಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮುಖ್ಯ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಅರಿವು ಮೂಡಿಸಬೇಕಾದುದು ಅವಶ್ಯಕ. ಸಂತೃಪ್ತ ಬದುಕಿಗಾಗಿ, ಸಮೃದ್ಧ ಜೀವನಕ್ಕಾಗಿ ನಿಜವಾದ ಧರ್ಮಾಚರಣೆಯ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಮೊದಲ್ಗೊಂಡು ಹಲವಾರು ಪರಿವಾರ ದೇವತೆಗಳ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಸುಖದ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮ ಪ್ರಜ್ಞೆ ಮತ್ತು ಸದಾಚಾರ ಸಂಸ್ಕೃತಿ ಬೆಳೆದುಕೊಂಡು ಬರಬೇಕಾಗಿದೆ. ಬೆಳಕಿನಲ್ಲಿ ಬೆಳಕಿಗೆ ಬೆಲೆಯಿಲ್ಲದೇ ಇರಬಹುದು. ಆದರೆ ಕತ್ತಲೆಯಲ್ಲಿ ಕಿರು ದೀಪಕ್ಕೂ ಹಿರಿದಾದ ಬೆಲೆಯುಂಟು. ನೀತಿ ನಿಯಮಗಳಿಲ್ಲದೇ ಸಮಾಜ, ನಾಡು ಬೆಳೆಯಲಾಗದು. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮ ಸರ್ವರ ಬಾಳಿಗೆ ಆಧ್ಯಾತ್ಮ ದಾರಿ ತೋರಿ ಉಜ್ವಲ ಜೀವನಕ್ಕೆ ಸ್ಫೂರ್ತಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬದುಕಿಗೆ ದಿಕ್ಸೂಚಿಯಾಗಿವೆ. ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಭವ್ಯ ಸುಂದರ ಶ್ರೀ ವೀರಭದ್ರೇಶ್ವರ ಮೊದಲ್ಗೊಂಡು ಅನೇಕ ದೇವಾಲಯಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡುತ್ತಿರುವ ತಮ್ಮೆಲ್ಲರ ಧರ್ಮ ನಿಷ್ಠೆ ಶ್ರದ್ಧಾ ಮನೋಭಾವ ಕಂಡು ಅತ್ಯಂತ ಸಂತೋಷವಾಗಿದೆ ಎಂದರು.
ರಾಂಪುರ ಹಾಲಸ್ವಾಮಿ ಮಠದ ಶಿವಕುಮಾರ ಸ್ವಾಮಿಗಳು, ಗೋವಿನಕೋವಿ ವಿಶ್ವಾರಾಧ್ಯ ಮಹಲಿಂಗ ಹಾಲಸ್ವಾಮಿಗಳು, ಹೊಟ್ಯಾಪುರ ಓಂಕಾರಸ್ವಾಮಿ ಉಪಸ್ಥಿತರಿದ್ದರು. ನ್ಯಾಮತಿ ಕೋಹಳ್ಳಿ ಹಿರೇಮಠದ ಎಸ್.ಕೆ. ವಿಶ್ವಾರಾಧ್ಯರು, ನ್ಯಾಮತಿ ಬಸವರಾಜ ಹೊಸಕಟ್ಟಿ, ಗ್ರಾಮದ ಎಲ್ಲ ಕುಲ ದೈವದ ಪ್ರಮುಖರು ಪಾಲ್ಗೊಂಡಿದ್ದರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ನೇತೃತ್ವ ವಹಿಸಿದ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಾಗರೀಕತೆಯ ಹೆಸರಿನಲ್ಲಿ ಸಂಸ್ಕೃತಿ ನಾಶಗೊಳ್ಳಬಾರದು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯು ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ದರ್ಶನದ ಅಮೂಲ್ಯ ಸಂದೇಶ ಸರ್ವರ ಬಾಳಿಗೆ ದಾರಿದೀಪವೆಂದರು.