ಮಂಗಳೂರು:- ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಜೆಎಂಎಫ್ಸಿ ಕೋರ್ಟ್ ಆದೇಶ ಹೊರಡಿಸಿದೆ.
ನಿನ್ನೆ(ಶುಕ್ರವಾರ) ರಾತ್ರಿ ಆತನನ್ನು ಸತತ ವಿಚಾರಣೆ ನಡೆಸಿದ್ದ ಎಸ್ಐಟಿ ಪೊಲೀಸರು ಇಂದು ಬೆಳಗ್ಗೆ ಚಿನ್ನಯ್ಯನನ್ನು ಬಂಧಿಸಿದ್ದರು. ಬಂಧನ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಸಿದ ಷಡ್ಯಂತ್ರದಲ್ಲಿ ಈತ ಭಾಗಿಯಾಗಿರುವ ಕಾರಣ ಎಸ್ಐಟಿ ಪೊಲೀಸರು ವಶಕ್ಕೆ ಕೇಳಿದ್ದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ 10 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿನಿಂದ ಚಿನ್ನಯ್ಯನನ್ನು ಕರೆತಂದು ಧರ್ಮಸ್ಥಳದ ಬಗ್ಗೆ ಕಥೆ ಕಟ್ಟಿ ಅದನ್ನು ಜಾರಿಗೆ ತರಲು ಈತನನ್ನು ಮುಂದೆ ಬಿಡಲಾಗಿದೆ. ಈತನಿಗೆ ಹಣದ ನೆರವನ್ನೂ ಕೆಲವರು ಒದಗಿಸಿದ್ದಾರೆ. ಈ ಪ್ರಕರಣದ ಸೂತ್ರಧಾರಿಗಳೇ ಬೇರೆ ಇದ್ದಾರೆ. ಅವರ ಮಾಹಿತಿ ಪಡೆಯಲು ಚಿನ್ನಯ್ಯ ಪೊಲೀಸ್ ಕಸ್ಟಡಿಗೆ ಬೇಕಾಗಿದ್ದಾನೆ ಎಂದು ಎಸ್ಐಟಿ ತಿಳಿಸಿತ್ತು.
ಅದರಂತೆ ಚಿನ್ನಯ್ಯ ನನ್ನು 10 ದಿನಗಳ ಕಾಲ SIT ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.