ಅಧಿಕಾರಿಗಳು ಇನ್ನಷ್ಟು ಕ್ರಿಯಾಶೀಲರಾಗಿ

0
Dharwad District Collector Divya Prabhu
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಳೆಗಾಲ ಆರಂಭವಾದರೆ ಚರಂಡಿಯಲ್ಲಿ ಕಸ-ಕಡ್ಡಿ, ಹೂಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮತ್ತು ಜನಜೀವನ ಅಸ್ತವ್ಯಸ್ತಗೊಳಿಸುವ ಸಂಭಾವ್ಯ ಪ್ರದೇಶಗಳಲ್ಲಿ ಮಹಾನಗರಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಮತ್ತು ಸಾರ್ವಜನಿಕರ ಅಭಿಪ್ರಾಯ ತಿಳಿಯಲು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಬುಧವಾರ ಬೆಳಿಗ್ಗೆ ಧಾರವಾಡನಗರದ ಹಲವು ಬಡಾವಣೆ, ನಗರಗಳಿಗೆ ಸ್ವತಃ ಭೇಟಿ ನೀಡಿ, ಕಾರ್ಯಪ್ರಗತಿ ಪರಿಶೀಲಿಸಿದರು.

Advertisement

ಆರಂಭದಲ್ಲಿ ಬಸ್ ಡಿಪೊ ಸರ್ಕಲ್, ಬಸ್ ಡಿಪೊ ಪಕ್ಕದ ರಾಜಕಾಲುವೆ, ಮದಿಹಾಳ, ನಿಜಾಮುದ್ದಿನ ಕಾಲೋನಿ, ಎಂ.ಆರ್. ನಗರ ನಾಲಾ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಸ್ವಚ್ಛಗೊಳಿಸಿದ್ದರೂ ಕೆಲವಡೆ ಮತ್ತೆ ಸಾರ್ವಜನಿಕರು ಕಸ-ಕಡ್ಡಿ, ಪ್ಲಾಸ್ಟಿಕ್ ಚೆಲ್ಲಿರುವುದನ್ನು ಗಮನಿಸಿ, ಸಾರ್ವಜನಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ತಪ್ಪಿದಲ್ಲಿ ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ, ಹೆಚ್ಚುವರಿ ಟ್ಯಾಕ್ಸ್ ಹಾಕಿ ಎಂದು ಸೂಚಿಸಿದರು.

ಮುಂಗಾರು ಪೂರ್ವ ಮಳೆಗಳಿಂದ ಮತ್ತು ಮಾನ್ಸೂನ್ ಮಳೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಜನಜೀವನ ಅಸ್ತವ್ಯಸ್ತ ಆಗದಂತೆ ಮುನ್ನೆಚರಿಕೆ ವಹಿಸಲು ಪ್ರತಿ ವಲಯಕ್ಕೆ ಒಂದು ಕ್ಷಿಪ್ರ ಕಾರ್ಯಪಡೆ (ರೆಸ್ಕ್ಯುಟಿಂಗ್)ಗಳನ್ನು ರಚಿಸಲು ಮತ್ತು ಈಗಾಗಲೇ ಇರುವ ಪಡೆಗಳಿಗೆ ಏರಿಯಾ ಹಂಚಿಕೆ ಮಾಡಿ, ಜನರ ದೂರು ಬಂದ ತಕ್ಷಣ ಅಟೆಂಡ್ ಮಾಡಲು ಸೂಚಿಸಿದರು.

ಹೆಸ್ಕಾಂ ಅಧಿಕಾರಿಗಳಿಂದ ನಗರದ ಪ್ರತಿ ವಿದ್ಯುತ್ ಕಂಬದ ಶಿಥಿಲತೆ, ತಂತಿಗಳು ಜೊತು ಬಿದ್ದಿರುವುದು, ಸಾರ್ವಜನಿಕರಿಗೆ ತಲುಪುವಂತೆ ಇರುವ ಮತ್ತು ಓಪನ್ ಎಲೆಕ್ಟ್ರಿಕಲ್ ಬೋರ್ಡ್ಗಳ ಬಗ್ಗೆ ಪರಿಶೀಲಿಸಿ, ಮೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕ ಹಾನಿ ಆಗದಂತೆ ದುರಸ್ತಿ, ಮುನ್ನೆಚ್ಚರಿಕೆ ಕ್ರಮವಹಿಸಿ, ವರದಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು.

ಮಳೆ, ಗಾಳಿ, ಸಿಡಿಲು, ಗುಡುಗು ಮಿಂಚು ಇವುಗಳಿಂದ ಜೀವ ಹಾನಿ ಆಗದಂತೆ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಆಯೋಜಿಸಲು ಈಗಾಗಲೇ ಸೂಚಿಸಲಾಗಿದೆ. ಈ ಕುರಿತು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಮಳೆ, ಗಾಳಿ ಹಾಗೂ ಇತರ ಪ್ರಕೃತಿ ವಿಕೋಪದಿಂದ ತೊಂದರೆಗಳು ಉಂಟಾದಾಗ ಸಾರ್ವಜನಿಕರಿಗೆ ತಕ್ಷಣ ಸಂಪರ್ಕಿಸಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆಯ ಎಲ್ಲ ವಲಯ ಆಯುಕ್ತರ ಮತ್ತು ಪಾಲಿಕೆಯ ಸಹಾಯವಾಣಿ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದರು.

ಮಹಾನಗರದ ಜನತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಸ್ವಚ್ಛ, ಸುಂದರ ಮತ್ತು ಸುಸಜ್ಜಿತ ನಗರವಾಗಿಸಲು ಆಯಕ್ತರಿಗೆ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಾರ್ವಜನಿಕರಿಗೆ ತಿಳಿಸಿದರು.

ಅತಿಯಾದ ಮಳೆ, ಮಳೆ ಪ್ರವಾಹಗಳ ಕಾರಣದಿಂದಾಗಿ ಯಾವುದೇ ಜಾನುವಾರು, ಮಾನವ ಜೀವಹಾನಿ ಆಗದಂತೆ ಮತ್ತು ಸಾರ್ವಜನಿಕ ಸ್ವತ್ತು ಹಾನಿ ಆಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮಹಾನಗರ ಪಾಲಿಕೆ ಕರ್ತವ್ಯವಾಗಿದೆ. ಆಯುಕ್ತರು ನಿರಂತರ ನಿಗಾ, ಉಸ್ತುವಾರಿ ವಹಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

 


Spread the love

LEAVE A REPLY

Please enter your comment!
Please enter your name here