ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿರುವ ‘ಧುರಂಧರ್’ ಸಿನಿಮಾ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯದ ಈ ಚಿತ್ರ ವಿಶ್ವಾದ್ಯಂತ 1100 ಕೋಟಿ ರೂಪಾಯಿ ಗಳಿಸಿದ್ದು, ಬಾಲಿವುಡ್ನ ಬಿಗ್ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರಿದೆ. ಆದರೆ ಈ ಮಹಾ ಯಶಸ್ಸಿನ ನಡುವೆಯೇ ಸಿನಿಮಾಗೆ ದೊಡ್ಡ ಮಾರುಕಟ್ಟೆಯೊಂದರಲ್ಲಿ ಪ್ರದರ್ಶನವೇ ಸಿಕ್ಕಿಲ್ಲ.
‘ಧುರಂಧರ್’ ಸಿನಿಮಾವನ್ನು ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಇದರ ಪರಿಣಾಮವಾಗಿ ನಿರ್ಮಾಪಕರು ಹಾಗೂ ವಿತರಕರು ಸುಮಾರು 90 ಕೋಟಿ ರೂಪಾಯಿ ಲಾಭವನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಚಿತ್ರದಲ್ಲಿ ಭಾರತ–ಪಾಕಿಸ್ತಾನ ಸಂಘರ್ಷವನ್ನು ಕೇಂದ್ರವಾಗಿ ಇಟ್ಟುಕೊಂಡು, ಪಾಕಿಸ್ತಾನದಿಂದ ನಡೆಯುವ ಭಯೋತ್ಪಾದಕ ಕೃತ್ಯಗಳನ್ನು ವಿವರವಾಗಿ ತೋರಿಸಲಾಗಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹೇಗೆ ನಡೆಯುತ್ತಿದೆ ಎಂಬ ಅಂಶವನ್ನು ಚಿತ್ರ ಬಿಚ್ಚಿಟ್ಟಿದೆ. ಇದೇ ವಿಷಯ ಮಿಡಲ್ ಈಸ್ಟ್ ರಾಷ್ಟ್ರಗಳ ಆಕ್ಷೇಪಕ್ಕೆ ಕಾರಣವಾಗಿದೆ.
ಲೆಬೆನಾನ್, ಸಿರಿಯಾ, ಇಸ್ರೇಲ್, ಜೋರ್ಡನ್, ಸೌದಿ ಅರೇಬಿಯಾ, ಯೆಮನ್, ಓಮನ್, ಬರ್ಹೇನ್, ಖತಾರ್, ಯುನೈಟೆಡ್ ಅರಬ್ ಎಮಿರೈಟ್ಸ್, ಕುವೈತ್, ಇರಾಕ್, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರಕ್ಕೆ ಪ್ರದರ್ಶನ ಅನುಮತಿ ನಿರಾಕರಿಸಲಾಗಿದೆ. ಪಾಕಿಸ್ತಾನದಲ್ಲೂ ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ ಅಲ್ಲಿನ ಜನರು ಪೈರಸಿ ಮೂಲಕ ಸಿನಿಮಾ ವೀಕ್ಷಿಸಿರುವುದಾಗಿ ವರದಿಯಾಗಿದೆ.
ವಿಲನ್ ಪಾತ್ರದಲ್ಲಿದ್ದ ಅಕ್ಷಯ್ ಖನ್ನಾ ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ನಾಯಕಿಯಾಗಿ ಸಾರಾ ಅರ್ಜುನ್ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಭಾರತೀಯ ಗುಪ್ತಚರ ಅಧಿಕಾರಿಯಾಗಿ ರಣವೀರ್ ಸಿಂಗ್ ಅಭಿನಯ ಶ್ಲಾಘನೀಯವಾಗಿದೆ. ಆದಿತ್ಯ ಧಾರ್ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮಿಡಲ್ ಈಸ್ಟ್ ಬ್ಯಾನ್ ಆದರೂ ಸಹ, ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ಓಟವನ್ನು ಇನ್ನೂ ಮುಂದುವರಿಸಿದೆ.



