ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಬಡವರಿಗೆ ಡಯಾಲಿಸಿಸ್ ಸೌಲಭ್ಯ ದೊರಕಿಸಿಕೊಡುವ ಸಲುವಾಗಿ ಈ ಸೇವೆಯನ್ನು ಆರಂಭಿಸಿದ್ದು, ಕೇಂದ್ರಕ್ಕೆ ಅಗತ್ಯವಿರುವ ಸೌಲಭ್ಯ ಹಾಗೂ ಸಿಬ್ಬಂದಿಯನ್ನು ಒದಗಿಸಲಾಗಿದೆ. ಅಗತ್ಯವಿರುವವರು ಇದರ ಸದುಪಯೋಗ ಮಾಡಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಬೇಕು. ಆಸ್ಪತ್ರೆಯನ್ನು ಶುಚಿಯಾಗಿಡುವದರೊಂದಿಗೆ ರೋಗಿಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನ್ಯಾಷನಲ್ ಹೆಲ್ತ್ ಮಿಷನ್(ಎನ್ಎಚ್ಎಂ) ಅಡಿ ಪಬ್ಲಿಕ್ ಪ್ರೈವೇಟ್ ಸಹಭಾಗಿತ್ವ (ಪಿಪಿಪಿ), ಡಿಸಿಡಿಸಿ ಹೆಲ್ತ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ (ಕಿಡ್ನಿ ಕೇರ್) ಸಹಯೋಗದಲ್ಲಿ 2 ಬೆಡ್ಗಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರ ಹೆಚ್ಚು ಅನುಕೂಲವಾಗಲಿದೆ. ಡಯಾಲಿಸಿಸ್ ಕೇಂದ್ರ ಆರಂಭಗೊಂಡಿರುವದರಿಂದ ಮೂತ್ರಕೋಶ (ಕಿಡ್ನಿ)ದ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳ ಪಾಲಿಗೆ ವರದಾನವಾಗಲಿದೆ. ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ವಾರದಲ್ಲಿ 2ರಿಂದ 3 ಬಾರಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಅದಕ್ಕಾಗಿ ಹುಬ್ಬಳ್ಳಿ, ಗದಗಕ್ಕೆ ಹೋಗಬೇಕಾಗಿತ್ತು. ಇತ್ತೀಚೆಗೆ ಶಿರಹಟ್ಟಿಯಲ್ಲಿಯೂ ಘಟಕ ಪ್ರಾರಂಭವಾಗಿತ್ತು. ಈಗ ಲಕ್ಷೇಶ್ವರ ಆಸ್ಪತ್ರೆಯಲ್ಲಿ ಈ ಸೌಲಭ್ಯ ಲಭಿಸುತ್ತಿರುವುದು ಕುಂದಗೋಳ, ಸವಣೂರು, ಶಿಗ್ಗಾಂವಿ, ಶಿರಹಟ್ಟಿ ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದರು.
ಇತ್ತಿಚೀನ ದಿನಗಳಲ್ಲಿ ಕಂಡುಬರುತ್ತಿರುವ ಡೆಂಘೀ ಜ್ವರದ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುವಂತಾಗಿರುವದಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳದಿರುವದು ಮುಖ್ಯ ಕಾರಣವಾಗಿದೆ. ಅದಕ್ಕಾಗಿ ಜನರು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸುವದರ ಜೊತೆಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಕರೆನೀಡಿದರು.
ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಮಾತನಾಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಸಿಗಬೇಕೆಂಬ ಕೂಗು ಬಹಳ ದಿನಗಳಿಂದ ಇತ್ತು. ಸರ್ಕಾರ ಬಡರೋಗಿಗಳ ಆರೋಗ್ಯ ಸೇವೆಗಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಡಯಾಲಿಸಿಸ್ ಕೇಂದ್ರ ಕಲ್ಪಿಸಿದೆ. ಲಕ್ಷೇಶ್ವರದಲ್ಲಿಯೂ ಈ ಸೇವೆ ಲಭಿಸುವಲ್ಲಿ ಶಾಸಕರು ಮತ್ತು ವೈದ್ಯರ ಪಾತ್ರ ಮಹತ್ವದ್ದಾಗಿದೆ. ರೋಗಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ, ಡಾ. ಗುರುರಾಜ ಕುಡಗಿ, ಡಾ. ಉಮೇಶ ಕೆಳಗಿನಮನಿ, ಡಾ. ಪ್ರವೀಣ ಸಜ್ಜನ, ಶಿರಹಟ್ಟಿ ಮಂಡಳದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತೇಶೆಟ್ಟರ, ನಗರ ಬಿಜಿಪಿ ಅಧ್ಯಕ್ಷ ನವೀನ ಬೆಳ್ಳಟ್ಟಿ, ವಿಜಯ ಮೆಕ್ಕಿ, ಲಂಕೆಪ್ಪ ಶೆರಸೂರಿ, ವಾಸಣ್ಣ ಪಾಟೀಲ್, ಗಿರೀಶ ಚೌರಡ್ಡಿ, ತಿಮ್ಮರೆಡ್ಡಿ ಮರಡ್ಡಿ, ಡಾ. ಕುಮಾರಸ್ವಾಮಿ ಹಿರೇಮಠ, ಬಸವರಾಜ ಚಕ್ರಸಾಲಿ, ಅನಿಲ ಮುಳುಗುಂದ, ಫಕ್ಕೀರೇಶ ಅಣ್ಣಿಗೇರಿ, ಮಂಜುನಾಥ ಗಜಾಕೋಶ, ನವೀನ ಕುಂಬಾರ, ಮಂಜುನಾಥ ಗೊರವರ, ಆಸ್ಪತ್ರೆ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.
ಅತ್ಯಾಧುನಿಕ ಯಂತ್ರೋಪಕರಣಗಳ ಕೇಂದ್ರ ಸ್ಥಾಪಿಸಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 4ರ ತನಕ ಕಾರ್ಯನಿರ್ವಹಿಸಲಿದೆ. ದಿನಕ್ಕೆ 4 ರೋಗಿಗಳಿಗೆ ಡಯಾಲಿಸಿಸ್ ಮಾಡಬಹುದು. ರೋಗಿಗಳ ಆರೋಗ್ಯದ ಸ್ಥಿತಿಗತಿಗೆ ಅನುಗುಣವಾಗಿ ಹೆಚ್ಚುವರಿ ಚಿಕಿತ್ಸೆಯೂ ದೊರೆಯಲಿದೆ. 2 ಸಾವಿರ ರೂ. ಮೌಲ್ಯದ ಚುಚ್ಚುಮದ್ದು ಸೇರಿ ಡಯಾಲಿಸಿಸ್ ಚಿಕಿತ್ಸೆ ಉಚಿತವಾಗಿದೆ.
– ಸಿದ್ದಲಿಂಗೇಶ್ವರ ಶಿವಶಿಂಪಿಗೇರ.
ಡಯಾಲಿಸಿಸ್ ಕೇಂದ್ರದ ಆಡಳಿತಾಧಿಕಾರಿ.