ವಿಜಯಸಾಕ್ಷಿ ಸುದ್ದಿ, ಗದಗ: ವಿಭಿನ್ನವಾದ ನೂತನ ಯೋಜನೆಗಳನ್ನು ರೂಪಿಸುವ ಮೂಲಕ ವಿಶ್ವಕರ್ಮ ಸಮಾಜವನ್ನು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘಟನೆಯ ಅಧ್ಯಕ್ಷರಾದ ರಾಜಗೋಪಾಲ ಕಡ್ಲಿಕೊಪ್ಪ ನೇತೃತ್ವದಲ್ಲಿ ಸಂಘಟಿಸುತ್ತಿರುವುದು ಇತರರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ ಅಭಿಪ್ರಾಯಪಟ್ಟರು.
ಅವರು ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವಕರ್ಮ ದಿನದರ್ಶಿಕೆ ಬಿಡುಗಡೆ, ವಿಶ್ವಕರ್ಮ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ, ಸಾಧಕರಿಗೆ ಮತ್ತು ಪದೋನ್ನತಿ ಹೊಂದಿದ ಸದಸ್ಯರಿಗೆ ಸನ್ಮಾನ ಮತ್ತು ವಿಶ್ವಕರ್ಮ ಸಮಾಜದ ಹಿರಿಯ ಸಾಹಿತಿ ಭೀಮಸೇನ ಬಡಿಗೇರ ವಿರಚಿತ `ಬೆಳ್ಳಿ ಬೆಳಕು’ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ, ವಿಶ್ವಕರ್ಮ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಹುನಗುಂದ ಶ್ರೀಮತ್ ಆನೇಗುಂದಿ ಸಂಸ್ಥಾನ ಮಠದ ಪಂಚಾನನ ಗುರುಗಳಾದ ಶ್ರೀ ಗುರಪ್ಪಯ್ಯ ಮಹಾಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜ ಬಾಂಧವರು ಸಂಘಟಿತರಾಗಿ ಎಂದು ಕರೆ ನೀಡಿದರು.
ಧಾರವಾಡ ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಪಿ. ಈರಣ್ಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಬಡಿಗೇರ ಹಾಗೂ `ಬೆಳ್ಳಿ ಬೆಳಕು’ ಗ್ರಂಥಕರ್ತರಾದ ಭೀಮಸೇನ ಬಡಿಗೇರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಸನ್ಮಾನ ಸ್ವೀಕರಿಸಿ, ಸಮಾರಂಭ ಉದ್ದೇಶಿಸಿ ಮಾತನಾಡಿದರು.
ವಿಶ್ವಕರ್ಮ ಸಜಾಜದ ಮುಖಂಡರಾದ ಮುತ್ತಣ್ಣ ಬಡಿಗೇರ, ಕಾಳೇಶ ಬಡಿಗೇರ, ಮೌನೇಶ ಬಡಿಗೇರ, ನಿಜಗುಣಿ ಶಹಾಪೂರ, ಆಯ್.ಜಿ. ಬಡಿಗೇರ, ರಾಘು ಕಮ್ಮಾರ, ಈರಣ್ಣ ಎಂ.ಬಡಿಗೇರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಶಿಲ್ಪಿ ಕವಲೂರ, ವಿಶ್ವಕರ್ಮ ಶಿಕ್ಷಣಭೂಷಣ ಪ್ರಶಸ್ತಿ ಪುರಸ್ಕೃತ ಎ.ಎನ್. ಬಡಿಗೇರ, ಪ್ರಾ.ಶಾ.ಶಿ. ಪತ್ತಿನ ಸಂಘದ ಅಧ್ಯಕ್ಷ ಸುರೇಶ ಕೊಪ್ಪದ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ಶಿವಪ್ಪ ಕಮ್ಮಾರ, ರಾಜ್ಯಮಟ್ಟದ ಕರಕುಶಲ ವಸ್ತುಪ್ರದರ್ಶನಕ್ಕೆ ಆಯ್ಕೆಯಾದ ಕುಮಾರ ಬಡಿಗೇರ, ಶೇಖರಪ್ಪ ಕಮ್ಮಾರ, ಬಿ.ಎಂ. ಬಡಿಗೇರ, ಬಿ.ಎಮ್. ಯರಕದ ಮುಂತಾದವರನ್ನು ಸನ್ಮಾನಿಸಲಾಯಿತು.
ಸುಮಂಗಲಾ ಪತ್ತಾರ ಪ್ರಾರ್ಥಿಸಿದರು. ಮೌನೇಶ ಸಿ.ಬಡಿಗೇರ(ನರೇಗಲ್ಲ) ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮಾತನಾಡಿ, ಸಮಗ್ರ ಮಾಹಿತಿ ಒಳಗೊಂಡ ವಿಶ್ವಕರ್ಮ ದಿನದರ್ಶಿಕೆಯನ್ನ ಗದಗ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಮಸ್ತ ಮನೆಗಳಿಗೆ ಉಚಿತವಾಗಿ ತಲುಪಿಸಲಾಗುವುದು. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಶ್ವಕರ್ಮ ವಧು-ವರ ಅನ್ವೇಷಣಾ ಕೇಂದ್ರ ಲೋಕಾರ್ಪಣೆಯಾಗಿದ್ದು, ಕೇಂದ್ರದ ಆ್ಯಪ್ ಮೂಲಕ ವಧು-ವರರ ಮಾಹಿತಿ ಸಂಗ್ರಹಿಸಿ ಸಂಪರ್ಕ ಸಾಧಿಸಿ ಅನ್ವೇಷಿಕರಿಗೆ ಅನಕೂಲಕ ಮಾಡಿಕೊಡಲಾಗುವುದು ಎಂದರು.


