ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು. ರಾಕೇಶ್ ಪೂಜಾರಿ ಅಂತ್ಯಕ್ರಿಯೆಯಲ್ಲಿ ಹಲವರು ಭಾಗಿಯಾಗಿದ್ದರು. ಯೋಗರಾಜ್ ಭಟ್, ರಕ್ಷಿತಾ ಪ್ರೇಮ್, ಆಂಕರ್ ಅನುಶ್ರೀ ಸೇರಿದಂತೆ ಇಡೀ ಕಾಮಿಡಿ ಕಿಲಾಡಿಗಳು ಟೀಂ ರಾಕೇಶ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದಿದ್ದು ರಾಕೇಶ್ ಕುಟುಂಬ ಸದಸ್ಯರಿಗೆ ದೈರ್ಯ ತುಂಬುವ ಕೆಲಸ ಮಾಡಿದ್ದರು. ಮೃತ ರಾಕೇಶ್ ಪೂಜಾರಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್-1 ಸಿನಿಮಾದಲ್ಲೂ ನಟಿಸಿದ್ದರು. ರಿಷಬ್ ಕೂಡ ರಾಕೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದರು. ಆದರೆ ರಿಷಬ್ ಶೆಟ್ಟಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ.
ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ರಾಕೇಶ್ ಪೂಜಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಪಾತ್ರದ ಶೂಟಿಂಗ್ ಕೂಡ ಮುಗಿಸಿಕೊಟ್ಟಿದ್ದರು. ಇದರ ನಡುವೆಯೇ ಅವರ ಅಕಾಲಿಕ ಮರಣಕ್ಕೆ ತುತ್ತಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕಾಂತಾರ ಚಿತ್ರತಂಡ ಕೂಡ ರಾಕೇಶ್ ಸಾವಿನಿಂದ ಆಘಾತಕ್ಕೆ ಒಳಗಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಸಂತಾಪ ಸೂಚಿಸಿದ್ದರೂ. ಆದರೂ ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರ್ತಿದೆ.
ರಾಕೇಶ್ ಪೂಜಾರಿ ಅವರು ರಿಷಬ್ ಶೆಟ್ಟಿಗೆ ತೀರಾ ಪರಿಚಿತರು ಜೊತೆಗೆ ರಾಕೇಶ್ ಊರು ಸಮೀಪವೇ ರಿಷಬ್ ಶೆಟ್ಟಿ ಅವರ ಊರು ಕೂಡ ಇದೆ ಎನ್ನಲಾಗಿದೆ. ಹೀಗಿರುವಾಗ ರಾಕೇಶ್ ಅವರ ಅಂತಿಮ ದರ್ಶನಕ್ಕೂ ರಿಷಬ್ ಬರಲೇ ಇಲ್ಲ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಸುಮ್ಮನೆ ಎಲ್ಲರಂತೆ ಪೋಸ್ಟ್ ಮೂಲಕ ಸಂತಾಪ ಸೂಚಿಸಿದರೆ ಸಾಕೇ? ನಿಮಗೆ ನಿಮ್ಮ ಸಿನಿಮಾದಲ್ಲೇ ನಟಿಸಿದ್ದ ನಟನ ಸಾವಿಗೆ ಅಂತಿಮ ದರ್ಶನ ಪಡೆಯುವುದಕ್ಕೂ ಬಿಡುವಿಲ್ಲದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀರಾ, ನಿಮಗೆ ನಿಮ್ಮ ಸಿನಿಮಾ ಶೂಟಿಂಗ್ ಹೆಚ್ಚಾಯ್ತಾ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.