ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಾ ದಂಡಾಧಿಕಾರಿ ಧನಂಜಯ ಎಂ ಅವರು ಸ್ವಾತಂತ್ರಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಜಯಂತಿ ಮತ್ತು ವಿಜಯೋತ್ಸವ ಆಚರಣೆಯನ್ನು ನಿರ್ಲಕ್ಷಿಸಿ ಅಪಮಾನ ಮಾಡಿದ್ದು, ಇವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಗುರುವಾರ ಲಕ್ಷ್ಮೀಶ್ವರ ತಹಸೀಲ್ದಾರ ಕಚೇರಿಯ ಎದುರು ಪಂಚಮಸಾಲಿ ಸಮಾಜ ಬಾಂಧವರು ವಿವಿಧ ಸಂಘಟನೆ ಮತ್ತು ಸಮಾಜದವರೊಡಗೂಡಿ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ ಕಚೇರಿಯಲ್ಲಿ ಚೆನ್ನಮ್ಮರ ಜಯಂತಿ ಆಚರಣೆ ಮಾಡಿಲ್ಲ ಎಂಬ ಸುದ್ದಿ ಹರಡಿದ ನಂತರ ಕಾಟಾಚಾರಕ್ಕೆ ಆಚರಣೆ ಮಾಡಿದ್ದಾರೆ. ಅಲ್ಲದೇ ತಹಸೀಲ್ದಾರ ಧನಂಜಯ ಎಂ ಸ್ಥಳೀಯವಾಗಿಯೇ ಇದ್ದರೂ ಚೆನ್ನಮ್ಮನ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಮತ್ತು ಈ ಬಗ್ಗೆ ಪೂರ್ವಭಾವಿ ಸಭೆಯನ್ನೂ ಮಾಡಿಲ್ಲ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿಗೆ ದೌಡಾಯಿಸಿದ ಸಮಾಜ ಬಾಂಧವರು ಕಚೇರಿಯ ಮುಂದೆ ಪೆಂಡಾಲ್ ಹಾಕಿ ಚೆನ್ನಮ್ಮಾಜಿ ಮತ್ತು ಮಹಾತ್ಮ ಗಾಂಧೀಜಿ ಫೋಟೋ ಇರಿಸಿ ಪ್ರತಿಭಟನೆಗಿಳಿದರು.
ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ವಿರೋಧ, ಕರ್ನಾಟಕ ರಕ್ಷಣಾ ವೇದಿಕೆ, ಕರವೇ ಸ್ವಾಭಿಮಾನಿ ಸೇನೆ, ಶ್ರೀರಾಮ ಸೇನೆ, ಸಂಗೊಳ್ಳಿ ರಾಯಣ್ಣ ವೇದಿಕೆ ಸೇರಿದಂತೆ ವಿವಿಧ ಸಮಾಜ ಮತ್ತು ಸಂಘಟನೆಯವರು, ಮಹಿಳೆಯರೂ ಸಹ ಪಾಲ್ಗೊಂಡಿದ್ದರಿಂದ ಕೆಲ ಹೊತ್ತಿಗೆ ತೀವ್ರ ಸ್ವರೂಪ ಪಡೆದುಕೊಂಡಿತು.
ತಾಲೂಕಾ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ತಹಸೀಲ್ದಾರ ಕಚೇರಿಯಲ್ಲಿ ತಡವಾದರೂ ಜಯಂತಿ ಆಚರಣೆ ಮಾಡಿಲ್ಲ ಎಂಬ ಮಾಹಿತಿಯಿಂದ ತಜಿವಿಜಿಗೊಂಡು ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ತಹಸೀಲ್ದಾರರು ಸ್ಥಳೀಯವಾಗಿಯೇ ಇದ್ದರೂ ಸಹ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿಲ್ಲ. ಜಯಂತಿ ಆಚರಣೆಯ ಕುರಿತು ಯಾವುದೇ ಸಭೆಯನ್ನೂ ಮಾಡಿಲ್ಲ ಮತ್ತು ಯಾರೊಬ್ಬರನ್ನೂ ಆಹ್ವಾನಿಸಿಲ್ಲ. ಇದು ಅವರ ಬೇಜಾವಾಬ್ದಾರಿತನ ಹಾಗೂ ಸರ್ಕಾರದ ಆದೇಶ ಧಿಕ್ಕರಿಸಿದ್ದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಇದು ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ಕಿತ್ತೂರ ರಾಣಿ ಚೆನ್ನಮ್ಮಾಜಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಇವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೇ ಪ್ರತಿಪಾದಿಸಿ ಮಾತನಾಡಿದ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ, ಕರವೇ (ನಾರಾಯಣಗೌಡ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಸಂಗೊಳ್ಳಿ ರಾಯಣ್ಣ ವೇದಿಕೆಯ ಮಂಜು ಮುಳಗುಂದ, ಪ್ರಕಾಶ ಮಾದನೂರ, ಲೋಕೇಶ ಸುತಾರ, ಹೊನ್ನಪ್ಪ ವಡ್ಡರ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ ಅನೇಕರು ತಹಸೀಲ್ದಾರ ಅಮಾನತ್ತು ಆಗಲೇಬೇಕು ಎಂದು ಪಟ್ಟು ಹಿಡಿದರು. ಬಟ್ಟೂರ ಗ್ರಾ.ಪಂನಲ್ಲಿಯೂ ಜಯಂತಿ ಆಚರಣೆ ನಿರ್ಲಕ್ಷಿಸಿದ್ದಾರೆ ಎಂದು ಗ್ರಾ.ಪಂ ಸದಸ್ಯ ಮಂಜುನಾಥ ಗೌರಿ ಆರೋಪಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಫ್.ವಿ. ಮರಿಗೌಡರ, ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಠಿ, ಶಿರಹಟ್ಟಿ ತಾಲೂಕಾಧ್ಯಕ್ಷ ಬಸವರಾಜ ತುಳಿ, ರಾಜ್ಯ ಸಂಚಾಲಕ ಸೋಮಣ್ಣ ಡಾಣಗಲ್, ಶರಣಪ್ಪ ಹೊಂಬಳ, ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಹೊನ್ನಪ್ಪ ವಡ್ಡರ, ಚನ್ನ ಮಾತನಾಡಿ, ಸರ್ಕಾರದ ಆದೇಶವನ್ನೂ ಪಾಲಿಸದ ಮತ್ತು ಸ್ವಾತಂತ್ರ ಹೋರಾಟಗಾರರಿಗೆ ಗೌರವ ಕೊಡದ ಅಧಿಕಾರಿ ನಮಗೆ ಬೇಡ ಎಂದರು.
ಈ ವೇಳೆ ಶಿವನಗೌಡ ಅಡರಕಟ್ಟಿ, ಗುರಪ್ಪ ಮುಳಗುಂದ, ಶಿವಜೋಗೆಪ್ಪ ಚಂದರಗಿ, ನೀಲಪ್ಪ ಕರ್ಜೆಕಣ್ಣವರ, ಶಂಕರ ಬ್ಯಾಡಗಿ, ಮಾದೇವಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ನೀರಾಲೋಟಿ, ನಿಂಗಪ್ಪ ಪ್ಯಾಟಿ, ಮುದ್ದಣ್ಣ ಸಾಲಮನಿ, ಚನ್ನಪ್ಪ ಕರಿಯತ್ತಿನ, ರಾಜು ಲಿಂಬಿಕಾಯಿ, ಶಿವು ಕಟಗಿ, ಚಂದ್ರು ಮಾಗಡಿ ಸೇರಿ ಅನೇಕರಿದ್ದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ಆರ್.ಕೆ ಅವರು, ಆದ ತಪ್ಪಿಗೆ ತಹಸೀಲ್ದಾರರಿಗೆ ನೊಟೀಸ್ ನೀಡಲಾಗುವುದು ಎಂದು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲೆತ್ನಿಸಿದರೂ ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೂ ಅಮಾನತ್ತಿನ ಅಧಿಕಾರ ಇಲ್ಲದಿದ್ದರೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಿಂದ ಅಮಾನತ್ತಿನ ಆದೇಶ ಮಾಡಿಸುವಂತೆ ಆಗ್ರಹಿಸಿದರು. ಅನಿವಾರ್ಯವಾಗಿ ಅಪರ ಜಿಲ್ಲಾಧಿಕಾರಿಗಳು ವಾಪಸ್ ತೆರಳಿದರು. ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ, ಅಲ್ಲಿಯೇ ಊಟ ಮಾಡಿ, ಮಳೆಯ ನಡುವೆಯೂ ಪ್ರತಿಭಟನೆ ಮುಂದುವರೆಸಿದರು.