ವಿಜಯಸಾಕ್ಷಿ ಸುದ್ದಿ, ಗದಗ: ವಿಕಲತೆ ಎಂಬುದು ಶಾಪವಲ್ಲ, ಅದನ್ನು ಸವಾಲಾಗಿ ಸ್ವೀಕರಿಸಬೇಕು. ಇಂತಹ ಮಕ್ಕಳ ಬೌದ್ಧಿಕ ಹಾಗೂ ಶೈಕ್ಷಣಿಕ ಸಾಮರ್ಥ್ಯ ವೃದ್ಧಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್ ಹೇಳಿದರು.
ಅವರು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಬೆಂಗಳೂರಿನ ಫೋರ್ಥ್ವೇ ಫೌಂಡೇಷನ್ ಆಶ್ರಯದಲ್ಲಿ ಗದುಗಿನ ಸರ್ಕಾರಿ ಶಾಲೆ ನಂ. ೪ರಲ್ಲಿ ಜರುಗಿದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕಲಿಕೆ ನಿರಂತರವಾಗಿರಲಿ. ವಿಶೇಷ ಮಕ್ಕಳು ಸಾಧಿಸಬಲ್ಲರು. ಅವರಲ್ಲಿ ಸ್ಪೂರ್ತಿ ತುಂಬುವ ಕಾರ್ಯ ನಡೆಯಬೇಕು. ಅವರಿಗಾಗಿಯೇ ಸರ್ಕಾರದ ಹಲವಾರು ಯೋಜನೆಗಳಿದ್ದು, ಅವುಗಳ ಸದ್ವಿನಿಯೋಗವಾಗಬೇಕೆಂದರು.
ಅಂಗವಿಕಲ ಮಕ್ಕಳ ಪಾಲನೆ-ಪೋಷಣೆಯಲ್ಲಿ ಪಾಲಕರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದ ಗದಗ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಸಿ. ನಾಗರಳ್ಳಿ, ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶಗಳು ಬೇಕು. ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯಲು ಸೂಕ್ತ ಅವಕಾಶಗಳನ್ನು ಕಲ್ಪಿಸಿದಲ್ಲಿ ಅವರು ಅಗಾಧವಾದ ಸಾಧನೆ ಮಾಡಬಲ್ಲರು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ ಮಾತನಾಡಿ, ವಿಕಲಚೇತನರು ಚೈತನ್ಯಶೀಲರು. ಅನೇಕ ಪ್ರತಿಭೆಗಳು ಅವರಲ್ಲಿ ಅಡಗಿರುತ್ತದೆ. ಅವರಲ್ಲಿಯ ವಿವಿಧ ಕಲೆಗಳಿಗೆ ನಾವು ಅವಕಾಶ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಶೇಷ ಚೇತನ ಮಕ್ಕಳು ಸಾಧನೆಯ ಮೆಟ್ಟಿಲೇರಿರುವವರು. ಉನ್ನತ ಹುದ್ದೆಗಳಲ್ಲಿ ಇಂದು ದಿವ್ಯಾಂಗರು ಇದ್ದು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು.
ಇದೇ ಸಮದರ್ಭದಲ್ಲಿ ಖಾಜಾ ಹುಸೇನ ಕಾತರಕಿ, ಮಂಜು ಭರಮಣ್ಣವರ, ನಾಸಿರುದ್ಧಿನ ಮಕಾನದಾರ, ಎಸ್.ಸಿ ನಾಗರಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ ಸ್ವಾಗತಿಸಿ ನಿರೂಪಿಸಿದರು, ಸುನೀತಾ ತಿಮ್ಮನಗೌಡ್ರ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ದಕ್ಷೀತಾ ಎಸ್, ಪವಿತ್ರಾ ಕಿಟಗೇರಿ, ವಿವೇದಿತಾ ದೇವರಕುಂಡಿ, ಸಾಗರ ಭಜಂತ್ರಿ, ಇಜಾಜ ನದಾಫ್, ಆಕೀಬ್ ಕರಡಿ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಇ.ಡಿ. ಹುಗ್ಗೇಣವರ, ಬಸವರಾಜ ಮಟ್ಟಿ, ಗವಿಸಿದ್ಧಯ್ಯ ಹಿರೇಮಠ ಸೇರಿದಂತೆ ಪುಷ್ಪಾ ಮಾನೆ, ಮಾಲನ್ ಹೊಸಳ್ಳಿ, ರತ್ನಾ ಚಂಡೂರ, ಗಣೇಶ ದೊಡ್ಡಮನಿ, ಸೈಮನ್ ರೋಡ್ರಿಗಸ್, ಕವಿತಾ ಎಸ್, ನಸರಿನ್ ಕರಡಿ, ಅಂಬಿಕಾ ರಾಯಬಾಗಿ, ಅರ್ಚನಾ ಪಾವನ್, ಸಂಗೀತಾ ಸೋಳಂಕಿ, ರೇಖಾ ಕಿರಟಗೇರಿ, ಸತೀಶ ಗಡಾದ, ಚಂದ್ರು ಉಪ್ಪಳಕರ, ಮಂಜುಳಾ ಕಾಕಿ, ಶೃತಿ ಶ್ಯಾವಿ, ಆಶಾ ಭಜಂತ್ರಿ, ಶಹನಾಜ್ ಬೇಗಂ ನದಾಫ್, ಗೀತಾ ಸಿದ್ದನಗೌಡ್ರ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ವಿವಿಧ ನ್ಯೂನತೆಗಳುಳ್ಳ ಮಕ್ಕಳು ಸಹ ಕಲಿಯಬಲ್ಲರು, ಆಡಬಲ್ಲರು ಎಂಬುದನ್ನು ನಾವು ಮನನ ಮಾಡಿಕೊಂಡು ಇಂತಹ ಮಕ್ಕಳೊಂದಿಗೆ ಅವಿನಾಭಾವ ಸಂಬಂಧ ಹೊಂದಬೇಕು. ಅವರ ಕಲಿಕೆಗೆ ಪೂರಕವಾಗಿ ಚಟುವಟಿಕೆ ಆಧಾರಿತ ಬೋಧನೆ ಪರಿಣಾಮಕಾರಿ, ಇದರ ಕಲಿಕೆಗೆ ಉತ್ತಮ ಪರಿಸರ ನಿರ್ಮಾಣವೇ ನಮ್ಮ ಗುರಿಯಾಗಿರಲಿ ಎಂದರು.