ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಗುರಿಯನ್ನು ಸಾಧಿಸುವ ಉದ್ದೇಶ ಇಟ್ಟುಕೊಂಡಿರಬೇಕು. ಅಂದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನ ಎನ್ನುವ ಮಹತ್ವದ ಘಟ್ಟದಲ್ಲಿ ಉನ್ನತ ಗುರಿಯ ಸಾಧನೆ ಹೊತ್ತು ಸಾಗುವ ವಿದ್ಯಾರ್ಥಿಗಳಲ್ಲಿ ಶಿಸ್ತು, ಕಠಿಣ ಪರಿಶ್ರಮ ಅವಶ್ಯವಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಎನ್. ನೆಗಳೂರ ಹೇಳಿದರು.
ಅವರು ಸಮೀಪದ ಶಿಗ್ಲಿ ಗ್ರಾಮದ ಶ್ರೀ ಪರಮೇಶ್ವರಪ್ಪ ಮಲ್ಲೇಶಪ್ಪ ಬಳಿಗಾರ ಸರಕಾರಿ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿ, ಕ್ರೀಡಾ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಿ.ಪಿ. ಹೇಮಾದ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಕಾಲೇಜುಗಳಲ್ಲಿ ಎಲ್ಲ ಸೌಲಭ್ಯಗಳ ಜೊತೆ ಅರ್ಹ ಉಪನ್ಯಾಸಕರ ಉತ್ತಮ ಬೋಧನೆ ದೊರೆಯುತ್ತಿದೆ. ವಿದ್ಯಾರ್ಥಿಗಳು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಸಾಗಿ ಎಂದು ಹೇಳಿದರು.
ಅತಿಥಿಗಳಾಗಿ ಮಂಜುನಾಥ ದೇಸಾಯಿ, ನಟರಾಜ ಪವಾಡದ, ಕೇಶವ ಗುಲಗಂಜಿ, ಶಿವಾನಂದ ಮುದಗಲ್, ಮಹಾಂತೇಶ ತಳವಾರ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಂಗ್ಲ ಬಾಷಾ ಉಪನ್ಯಾಸಕ ಅಶೋಕ ಪೂಜಾರ, ದಾನಿಗಳಾದ ಈರಪ್ಪ ಪುನಗಿನ, ಓಲಂಪಿಕ್ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟçಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಅನನ್ಯ ಹಿರೇಮಠ ಹಾಗೂ ಪ್ರಾಚಾರ್ಯ ಡಿ.ಪಿ. ಹೇಮಾದ್ರಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ವಿನೋದಾ ಅಂಗಡಿ ಸ್ವಾಗತಿಸಿದರು, ಶಿವಾನಂದ ಮುದಿಗೌಡ್ರ ವರದಿವಾಚನ ಮಾಡಿದರು. ಟಿ.ಎಫ್. ಪಾಟೀಲ, ಪ್ರವೀಣ ಮಹೇಂದ್ರಕರ ನಿರೂಪಿಸಿದರು.