ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಶಿಸ್ತನ್ನು ರೂಢಿಸಿಕೊಳ್ಳಬೇಕು, ಇದರಿಂದ ಪ್ರತಿದಿನದ ಶೈಕ್ಷಣಿಕ ಹಾಗೂ ಬದುಕಿನ ಎಲ್ಲ ಕಾರ್ಯಗಳನ್ನು ಯಶಸ್ವಿ ಹಾಗೂ ಕ್ರಿಯಾಶೀಲತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಶಿಸ್ತು ನಮ್ಮ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದು ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಹೇಳಿದರು.
ಅವರು ಬುಧವಾರ ಗದಗ-ಬೆಟಗೇರಿ ಲಯನ್ಸ್ ಕ್ಲಬ್ನಿಂದ ಗದುಗಿನ ಸರ್ಕಾರಿ ಕ.ಗಂ.ಮ ಶಾಲೆ ನಂ. 1ರಲ್ಲಿ ‘ನನ್ನ ಶಾಲೆ ನನ್ನ ಕೊಡುಗೆ’ ಕಾರ್ಯಕ್ರಮದನ್ವಯ ಗದುಗಿನ ನಿವೃತ್ತ ಗುರುಗಳಾದ ವೈ.ಆರ್. ಪಾಟೀಲರು ವಿದ್ಯಾರ್ಥಿಗಳಿಗೆ ದೇಣಿಗೆ ನೀಡಿದ ಟೈ-ಬೆಲ್ಟ್ ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರವು ಸರ್ಕಾರಿ ಶಾಲಾ ಮಕ್ಕಳಿಗಾಗಿ ನೀಡುವ ಹಲವಾರು ಸೌಲಭ್ಯಗಳೊಂದಿಗೆ ಸೇವಾ ಮನೋಭಾವದಿಂದ ಮಹನೀಯರಾದ ವೈ.ಆರ್. ಪಾಟೀಲರು ತಮ್ಮ ಮೊಮ್ಮಗಳಾದ ವಿದ್ಯಾರ್ಥಿನಿ ಯುಕ್ತಿ ರವಿರಾಜ ಪಾಟೀಲ ಅವರ ಹೆಸರಿನಲ್ಲಿ ಸರ್ಕಾರಿ ಶಾಲೆ ನಂ. 1 ಹಾಗೂ 11ರ ವಿದ್ಯಾರ್ಥಿಗಳಿಗೆ ಟೈ-ಬೆಲ್ಟ್ಗಳನ್ನು ಕೊಡುಗೆಯಾಗಿ ನೀಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ್ದಾರೆ. ದಾನಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಮನವಿ ಮಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಓದಿನಲ್ಲಿ ಆಸಕ್ತಿ ವಹಿಸಿದರೆ ಯಶಸ್ಸು ಸಾಧ್ಯ. ಮುಖ್ಯವಾಗಿ ಶಿಸ್ತು ಅವಶ್ಯ ಎಂದರು.
ಲಯನ್ಸ್ ಕ್ಲಬ್ನ ಖಜಾಂಚಿ ರೇಣುಕಪ್ರಸಾದ ಹಿರೇಮಠ ಮಾತನಾಡಿ, ಮಕ್ಕಳು ಮೌಲ್ಯಾಧಾರಿತ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು. ಪ್ರತಿದಿನ ತಪ್ಪದೇ ಶಾಲೆಗೆ ಬರುವದು ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಮೀನಾಕ್ಷಿ ಕೊರವಣ್ಣವರ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿರುವ ಆತ್ಮೀಯತೆ ಅಮೋಘವಾದದ್ದು. ಕೆಲವೊಂದು ಸೌಲಭ್ಯಗಳು ಮಕ್ಕಳಿಗೆ ಇರಲಿಕ್ಕಿಲ್ಲ. ಅದಕ್ಕಾಗಿ ಸಂಘ-ಸAಸ್ಥೆಗಳು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ರಮೇಶ ಶಿಗ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸರ್ಕಾರದ ಉಚಿತ ಸೌಲಭ್ಯಗಳೊಂದಿಗೆ ದಾನಿಗಳ ಸಹಾಯ-ಸಹಕಾರ ಅತ್ಯವಶ್ಯವಾಗಿದ್ದು, ಪ್ರತಿಯೊಬ್ಬರೂ ಸಹಾಯ ನೀಡಬೇಕು ಎಂದರು.
ವೇದಿಕೆಯ ಮೇಲೆ ಲಯನ್ಸ್ ಕ್ಲಬ್ನ ಲೇಡಿಸ್ ವಿಂಗ್ ಅಧ್ಯಕ್ಷೆ ಪೂಜಾ ಪಾಟೀಲ, ಮುಖ್ಯೋಪಾಧ್ಯಾಯೆ ಭಾರತಿ ಕುಲಕರ್ಣಿ, ವಿಜಯಲಕ್ಷ್ಮೀ ಜಕರಡ್ಡಿ ಉಪಸ್ಥಿತರಿದ್ದರು. ಎಫ್.ಎಸ್. ಹಿರೇಮಠ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಕುಂಠೋಜಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ನಿರೂಪಿಸಿದರು. ಶೋಭಾ ವಗ್ಗಿ ವಂದಿಸಿದರು.