ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವರು, ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳನ್ನು ಮುನ್ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪುರಾಣ-ಪ್ರವಚನದಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಪುರಾಣ ಪ್ರಚವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.
ಪುರಾಣ ಪ್ರವಚನಗಳನ್ನು ಶ್ರವಣ ಮಾಡುವ ಮೂಲಕ ಮನಸ್ಸಿನ ದುಃಖ-ದುಮ್ಮಾನಗಳು ಕಳೆದು ಮನಃಶಾಂತಿ, ನಿರ್ಮಲಶುದ್ಧ- ಪ್ರಸನ್ನಚಿತ್ತ ಮನಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ. ಪರಿಪೂರ್ಣ ಬದುಕಿಗೆ ಪ್ರವಚನಗಳು ಅಗತ್ಯವಾಗಿವೆ. ತಾಯಂದಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡುವ ಕಾರ್ಯವನ್ನು ಮಾಡಿ ಉತ್ತಮ ಪ್ರಜೆಗಳನ್ನು ರೂಪಿಸಬೇಕು. ಅಲ್ಲದೇ ನಮ್ಮ ಮುಂದಿನ ಪೀಳಿಗೆಯವರಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ-ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವದು ಅವಶ್ಯವಾಗಿದೆ. ಒಳ್ಳೆಯದನ್ನು ಕೇಳಿ ಅದನ್ನು ಮನನ ಮಾಡಿಕೊಂಡು ಜೀವನ ನಡೆಸುವದು ಅವಶ್ಯ. ಸಂತರ, ಶರಣರ, ಮಹಾತ್ಮರ ಚಿಂತನ-ಮಂಥನಗಳ ಸತ್ಸಂಗ ಕಾರ್ಯಕ್ರಮಗಳು ಜನರ ಮನಸ್ಸನ್ನು ಕಟ್ಟಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿವೆ ಎಂದರು.
ನೀಲಗುಂದದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೂ ಭಗಂತನ ಪ್ರೇರಣೆಯೇ ಮುಖ್ಯವಾಗಿರುತ್ತದೆ. ಆಧುನಿಕ ಜಗತ್ತಿನಲ್ಲಿ ಮೊಬೈಲ್, ಟಿವಿ, ಇತರೇ ಸಮೂಹ-ಸಂಪರ್ಕ ಮಾದ್ಯಮಗಳಿಂದ ಧಾರ್ಮಿಕ ನಂಬಿಕೆ, ಆಚರಣೆಗಳು ಮತ್ತು ಸಂಸ್ಕೃತಿಗಳನ್ನು ಮರೆಯುತ್ತಿರುವದು ದುರ್ದೈವದ ಸಂಗತಿಯಾಗಿದೆ. ಮಾನವ ಜೀವನದ ನಂತರವೂ ಸಮಾಜ ಸ್ಮರಿಸುವ ಶ್ರೇಷ್ಠ ಬದುಕು ರೂಪಗೊಳ್ಳಲು ಸಜ್ಜನರ ಸಹವಾಸ, ಶ್ರೇಷ್ಠರ ಆಚಾರ-ವಿಚಾರಗಳು, ಧರ್ಮದ ಸಂಸ್ಕಾರ ಮನುಷ್ಯನಿಗೆ ಅಗತ್ಯ. ಅಂತಹ ವಾತಾವರಣ ಕಲ್ಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದರು.
ಈ ವೇಳೆ ಗ್ರಾಮದ ಹಿರಿಯರಾದ ಮಾದೇವಪ್ಪ ಬೆಳವಿಗಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ತಹಸೀಲ್ದಾರ ವಿರೇಶ ಮುಳಗುಂದಮಠ, ಡಿ.ವಾಯ್. ಹುನಗುಂದ, ಶಿವಯೋಗಿ ಹಿರೇಮಠ, ನಾಗಪ್ಪ ತಂಬ್ರಳ್ಳಿ, ನಾಗರಾಜ ಬೆಳವಿಗಿ, ರಾಜು ಓಲೇಕಾರ, ಮಂಜುನಾಥ ಗುಡಮಿ, ಸೋಮಯ್ಯ ವಿರಕ್ತಮಠ ಸೇರಿದಂತೆ ದೇವಸ್ಥಾನ ಕಮಿಟಿಯವರು, ಹಿರಿಯರು ಇದ್ದರು.
ಪುರಾಣ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳ ವಾದ್ಯಗಳೊಂದಿಗೆ ಉಭಯ ಶ್ರೀಗಳ ಪಾಲ್ಗೊಳ್ಳುವಿಕೆಯೊಂದಿಗೆ ಪಾದಯಾತ್ರೆ ಮೂಲಕ ಜನಜಾಗೃತಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.