ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಹಿಳಾ ಸಂಘವನ್ನು ರಚಿಸಿದ್ದರಿಂದ ನಮ್ಮ ಮಹಿಳೆಯರಲ್ಲಿ ಒಗ್ಗಟ್ಟು ಮೂಡಿ ಇಂದು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಲ್ಲಿ ಸಫಲರಾಗಿದ್ದೇವೆ ಎಂದು ಮಲ್ಲಿಕಾರ್ಜುನ ಮಹಿಳಾ ವಿವಿಧೋದ್ದೇಶಗಳ ಹಾಗೂ ಕಲಾಭಿವೃದ್ಧಿ ಸಂಘದ ಅಧ್ಯಕ್ಷೆ ಕಸ್ತೂರೆವ್ವ ಕಲಕೇರಿ ಹೇಳಿದರು.
ಇಲ್ಲಿಯ ಮಲ್ಲಿಕಾರ್ಜುನ ಗುಡಿ ಓಣಿಯ ಮಲ್ಲಿಕಾರ್ಜುನ ಮಹಿಳಾ ವಿವಿಧೋದ್ದೇಶಗಳ ಹಾಗೂ ಕಲಾಭಿವೃದ್ಧಿ ಸಂಘದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಬಿಡುವಿಲ್ಲದ ತಮ್ಮ ದೈನಂದಿನ ಚಟುವಟಿಕೆಯನ್ನು ಬಿಟ್ಟು ಸಂಘಗಳಲ್ಲಿ ಭಾಗವಹಿಸುವುದು ಕಷ್ಟ ಎಂಬ ಆತಂಕದಲ್ಲಿಯೇ ಸಂಘವನ್ನು ರಚನೆ ಮಾಡಲಾಯಿತು. 68 ಸದಸ್ಯರನ್ನು ಒಗ್ಗೂಡಿಸಿ ಸಂಘವನ್ನು ರಚನೆ ಮಾಡಲಾಯಿತು. ಇದರಿಂದ ನಮ್ಮ ಸದಸ್ಯರಲ್ಲಿ ಒಗ್ಗಟ್ಟು ಮೂಡಿ ಒಂದು ಕಡೆ ಸೇರುವಂತಾಯಿತು. ತಮ್ಮಲ್ಲಿಯ ಕೀಳರಿಮೆಯನ್ನು ತೊರೆದು ಹಲವು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾದರು. ತಮ್ಮ ಕಷ್ಟ-ನಷ್ಟಗಳನ್ನು ಹಂಚಿಕೊಂಡು ಧ್ಯೆರ್ಯವಂತರಾಗಿದ್ದಾರೆ.
2014ರಲ್ಲಿ ರಚನೆಯಾದ ಸಂಘವು ಪ್ರತಿ ತಿಂಗಳು 100 ರೂ ಉಳಿತಾಯ ಖಾತೆಯನ್ನು ತೆರೆದಿದ್ದರಿಂದ ಇಂದು ಸಂಘದಲ್ಲಿ 12 ಲಕ್ಷ ರೂ.ವರೆಗೂ ವ್ಯವಹಾರ ನಡೆದಿದೆ. ಸದಸ್ಯರು ತಮ್ಮ ಕುಟುಂಬ ಹಾಗೂ ಸ್ವ-ಉದ್ಯೋಗ ಮಾಡಲು 20 ಸಾವಿರದಿಂದ 1 ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತಿದೆ. ಸಂಘದ ಬಡ್ಡಿ ಹಣದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ ಸನ್ಮಾನಿಸಲಾಗಿದೆ. ಗ್ರಾಮದ ಧಾರ್ಮಿಕ ಕಾರ್ಯಗಳಿಗೆ ಸಹಾಯ ಧನ ನೀಡಿ ಸೇವೆ ಸಲ್ಲಿಸುವ ಅವಕಾಶ ಬಂದಿದ್ದು ಸಂತಸ ತಂದಿದೆ ಎಂದರು.
ಶಿಕ್ಷಕಿ ಪ್ರೇಮಾ ಕರಮುಡಿ ಮಾತನಾಡಿ, ಮಹಿಳಾ ಸಂಘದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದರು.
ಮಹಿಳಾ ಸಂಜೀವಿನಿ ಒಕ್ಕೂಟದ ಗೀತಾ ಮದ್ನೂರು, ವಿಜಯಲಕ್ಷ್ಮಿ ಕಟಿಗ್ಗಾರ, ಪಾರಮ್ಮ ಹಡಗಲಿ, ನೀಲಗಂಗಮ್ಮ ಹಗರಿ, ಮಹಾದೇವಿ ಮಾಯಾಕರಮಠ, ಚನ್ನಮ್ಮ ಹಗರಿ, ಜಯಶ್ರೀ ಬಡಿಗೇರ, ಪಾರಮ್ಮ ಶಲವಡಿ ಸೇರಿದಂತೆ ಸಂಘದ ಸರ್ವ ಸದಸ್ಯರು ಇದ್ದರು. ಕಸ್ತೂರಿ ಹಡಗಲಿ ಸಂಗಡಿಗರು ಪ್ರಾರ್ಥಿಸಿದರು. ಲಲಿತಾ ಕುಲಕರ್ಣಿ ಸ್ವಾಗತಿಸಿದರು. ಸಂಘದ ಖಜಾಂಚಿ ಸಾವಿತ್ರಿ ಯಲಿಶಿರುಂದ ನಿರೂಪಿಸಿದರು. ಕವಿತಾ ಮುದ್ದಿಕೋಲ ವಂದಿಸಿದರು.
ಸಂಘದ ಉಪಾಧ್ಯಕ್ಷೆ ನಾಗರತ್ನಾ ಹಡಗಲಿ ಮಾತನಾಡಿ, ಪರಸ್ಪರ ಸಹಾಯ-ಸಹಕಾರದಿಂದ ಸಂಘವು ಆರ್ಥಿಕವಾಗಿ ಬೆಳೆಯುತ್ತಿದೆ. ಕಡಿಮೆ ಬಡ್ಡಿ ದರದಲ್ಲಿ ಲಕ್ಷ ರೂ.ವರೆಗೂ ಸಾಲ ಸೌಲಭ್ಯ ದೊರೆಯುತ್ತಿದ್ದು, ಸದಸ್ಯರು ತಮ್ಮ ಆರ್ಥಿಕ ಸಮಸ್ಯೆಗಳನ್ನು ಸಂಜೀವಿನಿ ಒಕ್ಕೂಟದಿಂದ ಬಗೆಹರಿಸಿಕೊಳ್ಳಬಹುದು ಎಂದರು.