ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಅಶೋಕ್ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಾತನಾಡಿದ ಅಶೋಕ್ ಮಂದಾಲಿ, ಗದಗ ತಾಲೂಕಿನ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅಕ್ಟೋಬರ್ನಿಂದ ನವೆಂಬರ್ 2025ರವರೆಗೆ 79605 ಅರ್ಜಿಗಳು ನೋಂದಣಿಯಾಗಿದ್ದು, 79179 ಫಲಾನುಭವಿಗಳಿಗೆ ಒಟ್ಟು 31.66 ಕೋಟಿ ರೂ. ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದ ಅವರು, ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ಅರ್ಹರಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯಡಿಯಲ್ಲಿ ಡಿಸೆಂಬರ್ 2025ರವರೆಗೆ 2,594 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 1,081 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ. ಉಳಿದ 1,513 ಅಭ್ಯರ್ಥಿಗಳು ಯೋಜನೆಯ ಷರತ್ತುಗಳ ಪ್ರಕಾರ ಹಂತ ಹಂತವಾಗಿ ಅರ್ಹರಾಗಲಿದ್ದಾರೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಗದಗ ಗ್ರಾಮೀಣ ಭಾಗದಲ್ಲಿ ಜನವರಿ 2026ರವರೆಗೆ 1,80,659 ಸದಸ್ಯರಿಗೆ ಒಟ್ಟು 7,405.80 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಗದಗ ನಗರ ಭಾಗದಲ್ಲಿ 1,33,542 ಸದಸ್ಯರಿಗೆ 5,240.95 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ. ಯಾವುದೇ ಅರ್ಹರು ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಭಾಗದಲ್ಲಿ 53,122 ಸ್ಥಾವರಗಳು ಅರ್ಹರಾಗಿದ್ದು, 52,951 ಸ್ಥಾವರಗಳು ನೋಂದಣಿಯಾಗಿವೆ. ಉಳಿದ ಅರ್ಹ ಗ್ರಾಹಕರನ್ನೂ ಶೀಘ್ರ ನೋಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಈಶ್ವರ ಹುಣಿಸಿಕಟ್ಟಿ, ಶರೀಫ ಬಿಳೆಎಲಿ, ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಸಾವಿತ್ರಿ ಹೂಗಾರ, ಸಂಗು ಕರೆಕಲಮಟ್ಟಿ, ಸಂಗಮೇಶ ಎಂ.ಹಾದಿಮನಿ, ರಮೇಶ್ ಹೊನ್ನಿಕಾಯ್ಕರ, ದೇವರಡ್ಡಿ ಬಿ.ತಿರ್ಲಾಪುರ, ಗಣೇಶ್ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್.ಬಾರಕೇರ, ಭಾಷಾ ಮಲ್ಲಸಮುದ್ರ ಹಾಗೂ ಮಲ್ಲಯ್ಯ ಕೊರವನವರ ಉಪಸ್ಥಿತರಿದ್ದರು.
ಶಕ್ತಿ ಯೋಜನೆ ಪ್ರಗತಿ ಕುರಿತು ವಿವರಿಸಿ, ಗದಗ ಘಟಕದಲ್ಲಿ 11-06-2023ರಿಂದ 24-02-2026ರವರೆಗೆ 2.85 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 89.23 ಕೋಟಿ ರೂ ಮೌಲ್ಯದ ಉಚಿತ ಟಿಕೆಟ್ ವಿತರಿಸಲಾಗಿದೆ. ಬೆಟಗೇರಿ ಘಟಕದಲ್ಲಿ 1.33 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, 92.63 ಕೋಟಿ ರೂ ಮೌಲ್ಯದ ಟಿಕೆಟ್ ವಿತರಣೆಯಾಗಿದೆ ಎಂದು ಅಶೋಕ್ ಮಂದಾಲಿ ತಿಳಿಸಿದರು.



