50 ಸಾವಿರ ಮಿರ್ಚಿ ಭಜಿ ಪ್ರಸಾದ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯ ಸ್ಮರಣೋತ್ಸವ ಹಾಗೂ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ಪ್ರಸಾದದಲ್ಲಿ ನಗರದ ವೀರನಾರಾಯಣ ಬಡಾವಣೆಯ ಶ್ರೀ ಡಾ. ಪಂಡಿತ್ ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ ವತಿಯಿಂದ 50 ಸಾವಿರ ಮಿರ್ಚಿ ಭಜಿ ಪ್ರಸಾದ ವಿತರಣೆ ಮಾಡಿದರು.

Advertisement

ಟ್ರಸ್ಟ್ನ ಅಧ್ಯಕ್ಷ ಶಿದ್ರಾಮಯ್ಯ ಕಟಗಿಹಳ್ಳಿಮಠ ಈ ಸಂದರ್ಭದಲ್ಲಿ ಮಾತನಾಡಿ, ಪ್ರತೀ ವರ್ಷದಂತೆ ನಮ್ಮ ಟ್ರಸ್ಟ್ ವತಿಯಿಂದ ಮಿರ್ಚಿ ಭಜಿ ಸೇವೆ ಮಾಡಲಾಗಿದೆ. ಇದಕ್ಕೆ ಶ್ರೀ ಡಾ. ಪಂ. ಪುಟ್ಟರಾಜ ಗವಾಯಿಗಳು ಪ್ರೇರಣೆಯಾಗಿದ್ದಾರೆ. ಅವರ ದೇವಸ್ಥಾನವನ್ನು ನಮ್ಮ ಬಡಾವಣೆಯಲ್ಲಿ ನಿರ್ಮಾಣ ಮಾಡಿ ದಿನನಿತ್ಯ ಅವರಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದರು.

ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಮಹಾಪ್ರಸಾದ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಅನ್ನದಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು. ಈ ಪ್ರಸಾದ ಸೇವೆ ಮಾಡುತ್ತಿರುವ ನಿಮಗೆಲ್ಲ ಪುಟ್ಟರಾಜ, ಪಂಚಾಕ್ಷರಿ ಗವಾಯಿಗಳ ಆಶೀರ್ವಾದ ಸದಾ ಇರಲಿ ಎಂದರು.

ಪ್ರಸಾದ ಸೇವೆಯ ಸಂದರ್ಭದಲ್ಲಿ ಟ್ರಸ್ಟ್ನ ಉಪಾಕ್ಷರಾದ ಬಸನಗೌಡ ಪಾಟೀಲ, ಕಾರ್ಯದರ್ಶಿ ಗಂಗಾಧರ ಬೆನಕಲ್, ಸದಸ್ಯರಾದ ಈಶಪ್ಪ ಅಂಗಡಿ, ಮಾಂತೇಶ ಲಗಳಿ, ಬಸವರಾಜ್ ದಾವಣಗೆರೆ, ಭೀಮಪ್ಪ ಮೊಕಾಶಿ, ಶರಣಪ್ಪ ಮೇಟಿ, ಸಂಘದ ಪದಾಧಿಕಾರಿಗಳಾದ ಶಿವಯ್ಯ ಬೆಳ್ಳಿರಿಮಠ, ಸುನೀಲ ಚಿನ್ನಾಪುರ, ಶಿವಪ್ಪ ಲಗಳಿ ಮಲ್ಲಿಕಾರ್ಜುನ ಕಿರೇಸೂರ, ರಾಜಶೇಖರ ಶೆಟ್ಟಣ್ಣವರ, ಪುಟ್ಟು ಕೊರ್ಲಳ್ಳಿ, ಮಂಜು ಕ್ಯಾಡದ, ಕೊಟ್ಟೂರು ಬಸಪ್ಪ, ಈರಣ್ಣ ಕಾತರಕಿ, ಗ್ಯಾನಪ್ಪ ಹಾಳಕೇರಿ, ದರ್ಶನ್ ಮುಂತಾದವರು ಉಪಸ್ಥಿತರಿದ್ದರು. ಸಾವಿರಾರು ಭಕ್ತರು, ಕಲಾವಿದರು, ಗುರು ಬಂಧುಗಳು ಪ್ರಸಾದ ಸೇವಿಸಿ ಪುನೀತರಾದರು.


Spread the love

LEAVE A REPLY

Please enter your comment!
Please enter your name here