ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮೀಣ ಭಾಗದಲ್ಲಿ ಐಟಿಐ ಕಾಲೇಜು ತೆರೆದು ಬಡವರ ಮಕ್ಕಳಿಗೆ ಆಶ್ರಯದಾತರಾಗಿದ್ದ ಲಿಂ.ಡಾ.ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದೂರದೃಷ್ಟಿಯ 12ನೇ ಶತಮಾನದ ವಿಶ್ವಗುರು ಬಸವೇಶ್ವರರ ಕಾಯಕ ತತ್ವದಂತೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಶ್ರೀಗಳ ಕಾರ್ಯ ಶಾಶ್ವತವಾಗಿದೆ ಎಂದು ಟೋಯೊಟೊ ಕಿರ್ಲೋಸ್ಕರ್ ಕಂಪನಿಯ ಎಚ್ಆರ್ ಮಧು ಎಮ್.ಎನ್ ಹೇಳಿದರು.
ಡಂಬಳ ಗ್ರಾಮದ ಜಗದ್ಗುರು ತೊಂಟದಾರ್ಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಟೋಯೊಟಾ ಕಿರ್ಲೋಸ್ಕರ ಮೋಟರ್ಸ್ ತರಬೇತುದಾರ ಸಂತೋಷ ಕುಮಾರ ಮಾತನಾಡಿ, ಎಸ್.ಎಸ್.ಎಲ್.ಸಿ ಪಾಸದ ವಿದ್ಯಾರ್ಥಿಗಳು ಬಹಳ ಮಂದಿ ಪಿಯುಸಿಯಂತಹ ಸಾಂಪ್ರಾದಾಯಿಕ ಕೋರ್ಸ್ಗಳ ಅಧ್ಯಯನದ ಕಡೆಗೆ ಗಮನ ಹರಿಸುತ್ತಾರೆ. ಆದರೆ ಕೇವಲ ಎರಡು ವರ್ಷಗಳ ವ್ಯಾಸಂಗ ಮಾಡಿದರೆ ಸಾಕು ಉದ್ಯೋಗ ಪಡದು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳವಂತಹ ವೃತ್ತಿಪರ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಹೇಳಿದರು.
ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ಈ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕೆಲವರು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ.
ಲಿಂ.ತೋಂಟದ ಸಿದ್ದಲಿಂಗ ಸ್ವಾಮೀಜಿ ಡಂಬಳದಲ್ಲಿ ಮಾಡಿದ ಕೃಷಿ, ತೋಟಗಾರಿಕೆ ಬೆಳೆಗಳಿಂದ ರೈತರಿಗೆ ಪ್ರೇರಣೆಯಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಎಸ್.ಎಂ. ಶಿವರಾಚಯ್ಯ, ಗ್ರಾಮೀಣ ಭಾಗದ ಬಡವರ, ಹಿಂದುಳಿದ ವರ್ಗದ ಹಲವು ವಿದ್ಯಾರ್ಥಿಗಳು ಇಲ್ಲಿ ವೃತ್ತಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಜುಲೈ 2024ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತರಬೇತಿದಾರರಾದ ಆರ್.ವಿ. ಪಾಟೀಲ, ಎಸ್.ನಾಲವತ್ತವಾಡಮಠ, ಐ.ಎಸ್. ಯಲಿಗಾರ, ಎಸ್.ಎಂ. ಇಲಕಲ್ಲ, ಆರ್.ಜಿ. ಕೊರ್ಲಹಳ್ಳಿ, ಜಿ.ಎಂ. ಬಡಿಗೇರ, ಎಂ.ಆರ್. ಕಟ್ಟಿಮನಿ. ಎಸ್.ಎಸ್. ಕುಂಬಾರ, ಬಸವರಾಜ ಬಡಿಗೇರ, ಶಿವರಾಜ ಅಣ್ಣಿಗೇರಿ, ಆರ್.ವಿ. ಗಳಗಿ, ಆರ್.ಟಿ. ನೆರಗಲ್ಲ, ಕೆ.ಜೆ. ಅಬ್ಬಿಗೇರಿ ಮುಂತಾದವರಿದ್ದರು.