ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸರಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾ.ಪಂ ಸದಸ್ಯ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ-2ರ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ ಹೇಳಿದರು.
ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ 2ರಲ್ಲಿ ಕೃಷಿ ಇಲಾಖೆಯಿಂದ ಒದಗಿಸಲಾದ ಹಿಂಗಾರಿ ಹಂಗಾಮಿನಲ್ಲಿ ಬಿತ್ತುವ ಕಡಲೆ ಮತ್ತು ಜೋಳದ ಬೀಜವನ್ನು ವಿತರಿಸಿ ಮಾತನಾಡಿದರು.
ನಮ್ಮ ಸಂಘವು ರೈತೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದು, ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರಿನಲ್ಲಿ ಕೃಷಿ ಇಲಾಖೆಯ ಸಹಕಾರದೊಂದಿಗೆ ಬಿತ್ತನೆಯ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರವನ್ನು ಸಹ ತೆರೆಯಲಾಗುತ್ತಿದ್ದು, ಮುಂದಿನ ವರ್ಷದಿಂದ ರಾಸಾಯನಿಕ, ಸಾವಯವ ಗೊಬ್ಬರವನ್ನು ಸಹ ಮಾರಾಟ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ಲ ಮಾತನಾಡಿ, ಹಿಂಗಾರು ಹಂಗಾಮಿನ ಕಡಲೆ ಮತ್ತು ಜೋಳದ ಬೀಜವನ್ನು ವಿತರಿಸಲಾಗುತ್ತಿದೆ. ರಿಯಾಯತಿ ದರದಲ್ಲಿ ದೊರೆಯುವ ಬಿತ್ತನೆ ಬೀಜ ಖರೀದಿಗೆ ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್, ಎಫ್.ಐ.ಡಿ ಸಂಖ್ಯೆ ಹಾಗೂ ಎಸ್.ಸಿ/ಎಸ್.ಟಿ ರೈತರು ಇವುಗಳೊಂದಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಿ ಬೀಜವನ್ನು ಖರೀದಿ ಮಾಡಬೇಕು ಎಂದು ವಿವರಿಸಿದರು.
ಬೆಟಗೇರಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಮೇಶ ಜಟ್ಟಿ ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಸಿಗುವ ಬೀಜ, ಗೊಬ್ಬರ, ಕೃಷಿ ಪರಿಕರಗಳ ಕುರಿತು ವಿವರಿಸಿದರು.
ಸಂಘದ ನಿರ್ದೇಶಕರಾದ ಮಲ್ಲನಗೌಡ ಪಾಟೀಲ, ರಾಚಪ್ಪ ನಾಲ್ವಾಡದ ಕಲ್ಲಪ್ಪ ಬೆಟಗೇರಿ, ಗವಿಶಿದ್ದಪ್ಪ ರೇವಡಿ, ಶಂಕ್ರಪ್ಪ ಕುಂಬಾರ, ಅಂದಾನಯ್ಯ ಪತ್ರಿಮಠ, ಫಕ್ಕೀರಯ್ಯ ಪತ್ರಿಮಠ, ನೀಲವ್ವ ರವದಿ, ಅನ್ನಪೂರ್ಣವ್ವ ಹಡಗಲಿ, ಸಕ್ರಪ್ಪ ರಾಮತಾಳ ಇದ್ದರು.