ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರಕಾರ ಮಾಡದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ನಾಡಿನ ಜನರ ಮನೆ–ಮನಗಳಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರು ನೆಲೆ ನಿಂತಿದ್ದಾರೆ. ಅವರ ಸಮಾಜಮುಖಿ ಕೆಲಸಗಳಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುವಂತಾಗಿದೆ ಎಂದು ರೈತಪರ ಹೋರಾಟಗಾರ ಮಂಜುನಾಥ ಮಾಗಡಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಯಜಮಾನ ಜಿ.ಎಫ್. ಉಪನಾಳ ಶಾಂತಿಧಾಮ ವೃದ್ಧಾಶ್ರಮದಲ್ಲಿ ಮಂಗಳವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆಯ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ವೃದ್ಧಾಶ್ರಮದ ಹಿರಿಯರಿಗೆ ಹಣ್ಣು–ಹಂಪಲಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಧರ್ಮಸ್ಥಳ ಕೇವಲ ಒಂದು ಯಾತ್ರಾ ಸ್ಥಳವಾಗಿರದೆ, ಅದೊಂದು ಧಾರ್ಮಿಕ ಪರಂಪರೆಯನ್ನು ಜಗತ್ತಿಗೆ ಸಾರುವ ಜಾಗೃತ ಸ್ಥಳವಾಗಿದೆ. ಈ ಸ್ಥಳ, ಖಾವಂದರನ್ನು ಟೀಕಿಸುವ ಕಾರ್ಯ ಮಾಡುವ ಯಾವುದೇ ವ್ಯಕ್ತಿಯೂ ಸಹ ಬೆಳೆಯಲು ಸಾಧ್ಯವಿಲ್ಲ. ಲಕ್ಷಾಂತರ ಜನರಿಗೆ ನಿರಂತರವಾಗಿ ಅನ್ನದಾಸೋಹ ನಡೆಸಿಕೊಂಡು ಹೋಗುವ ಶ್ರೀ ಹೆಗ್ಗಡೆಯವರು ಕಳಂಕರಹಿತರಾಗಿ ಜನಹಿತ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಜನ್ಮದಿನದಂದು ಅನೇಕ ವಿಶೇಷ ಕಾರ್ಯಕ್ರಮಗಳನ್ನು ಅವರ ಭಕ್ತವೃಂದ ನಡೆಸಿರುವದು ಸ್ತುತ್ಯಾರ್ಹ ಎಂದು ಹೇಳಿದರು.
ಯೋಜನಾಧಿಕಾರಿ ಪುನೀತ್ ಓಲೇಕಾರ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆಯವರು ಸಾಮಾಜಿಕ ಚಿಂತನೆ, ದೂರದೃಷ್ಟಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸುಮಾರು 21 ಸಾವಿರಕ್ಕೂ ಅಧಿಕ ಕಡುಬಡವರಿಗೆ, ನಿರ್ಗತಿಕರಿಗೆ ಮಾಶಾಸನ, ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವದು, ಎಲ್ಲಕ್ಕಿಂತ ಮುಖ್ಯವಾಗಿ ಕೆರೆಗಳ ಪುನರುಜ್ಜೀವನ ಕಾರ್ಯ ಬಹುದೊಡ್ಡ ಅಂದೋಲನವಾಗಿ ಮಾಡಿದ್ದು ಶ್ರೀಗಳ ಹೆಗ್ಗಳಿಕೆಯಾಗಿದೆ. ಇಂತಹ ಮಹಾನ್ ಪುರುಷರ ಹುಟ್ಟುಹಬ್ಬವನ್ನು ಹಿರಿಯರ ಸಾನ್ನಿಧ್ಯದಲ್ಲಿ ಆಚರಿಸುವ ಕಾರ್ಯವನ್ನ ಮಾಡಿದ್ದು ಹೆಮ್ಮೆಯೆನಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಉಪನಾಳ ವಹಿಸಿದ್ದರು. ಉಪಾಧ್ಯಕ್ಷ ದಿಗಂಬರ ಪೂಜಾರ, ಬಸವರಾಜ ಹಿರೇಮನಿ, ಧರ್ಮಸ್ಥಳ ಸಂಸ್ಥೆಯ ಕೊಪ್ಪಳ ವಲಯ ಬೀಸಿ ಯೋಜನಾಧಿಕಾರಿ ಚಂದ್ರಶೇಖರ, ಆಂತರಿಕ ಲೆಕ್ಕಪರಿಶೋಧಕ ಚಂದ್ರಹಾಸ, ಸೇವಾ ಪ್ರತಿನಿಧಿಗಳಾಗಿರುವ ನಿಂಗಪ್ಪ ಪಾಟೀಲ, ಶೃತಿ, ಸಚಿನ್, ಈರಣ್ಣ, ವೃದ್ಧಾಶ್ರಮದ ನಿಲಯ ಮೇಲ್ವಿಚಾರಕಿ ಅಶ್ವಿನಿ ಮುಂತಾದವರಿದ್ದರು.



