ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯ ಅಡಿಯಲ್ಲಿ ನಾಗಾಸಾಧು ಶ್ರೀ ಸಹದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದ ಅಂಗವಾಗಿ ನಾಗಾಸಾಧುಗಳಿಂದ ನಗರದ ಭಕ್ತಾಧಿಗಳಿಗೆ ಲಕ್ಷ ರುದ್ರಾಕ್ಷಿ ವಿತರಣೆ ಕಾರ್ಯಕ್ರಮದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ರುದ್ರಾಕ್ಷಿ ಆಶೀರ್ವಾದ ಪಡೆದರು.
ಅತಿರುದ್ರ ಮಹಾಯಜ್ಞದಲ್ಲಿ ಭಾಗವಹಿಸಿ ಶಿವಲಿಂಗದ ರುದ್ರಾಭಿಷೇಕ ಮಾಡುವದರಿಂದ 1.25 ಲಕ್ಷ ಮಹಾ ಮೃತ್ಯುಂಜಯದ ಜಪದ ಫಲ ಪ್ರಾಪ್ತಿಯಾಗುತ್ತದೆ. ಯಾಗದ ಸಮಯದಲ್ಲಿ ಬಲವಾದ ಧನಾತ್ಮಕ ಶಕ್ತಿಯ ಸೃಷ್ಟಿಯಾಗುವದರಿಂದ ಪರಿಸರವನ್ನು ಮತ್ತು ಪಾಲ್ಗೊಂಡವರನ್ನು ಶುದ್ಧೀಕರಿಸುತ್ತದೆ.
ಭಗವಾನ್ ರುದ್ರನು ಸಮಸ್ತ ನಕಾರಾತ್ಮಕ ಶಕ್ತಿಗಳ ನಿವಾರಕನಾಗಿರುವದರಿಂದ ಈ ಯಾಗದಿಂದ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ಅತಿರುದ್ರ ಮಹಾಯಜ್ಞದಿಂದ ಲಕ್ಷ್ಮೀ ದೇವಿಯ ಅನುಗ್ರಹವಾಗುತ್ತದೆ. ಅತಿರುದ್ರ ಯಾಗವು ತ್ರಿಲೋಕಗಳ ಅಧಿಪತಿಯಾದ ಭಗವಾನ್ ರುದ್ರನನ್ನು ಪ್ರಾರ್ಥಿಸುವ ಒಂದು ಆಚರಣೆಯಾಗಿದ್ದು, ಇದರಿಂದ ರುದ್ರನ ಕರುಣೆ ಮತ್ತು ಅನುಗ್ರಹವನ್ನು ಪಡೆಯಲು ಹಾಗೂ ಮೋಕ್ಷ ಹೊಂದುವ ಶ್ರೇಷ್ಠ ಮಾರ್ಗವಾಗಿದೆ.


