ವಿಜಯಸಾಕ್ಷಿ ಸುದ್ದಿ, ರೋಣ : ದಾಖಲಾತಿಯಿರುವ ಕೊಠಡಿಗಳಿಗೆ ಅಗತ್ಯ ಭದ್ರತೆಯಿರಬೇಕು. ಇಲ್ಲಿ ನೋಡಿದರೆ ಏನೂ ಇದ್ದಂತಿಲ್ಲ. ಇಂತಹ ನಿಷ್ಕಾಳಜಿಯನ್ನು ಸಹಿಸಲು ಸಾದ್ಯವಿಲ್ಲ. ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸರ್ವೇ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿರವರು ರೋಣ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ಕಚೇರಿಯ ವಿವಿದ ಕೊಠಡಿಗಳ ವಸ್ತುಸ್ಥಿತಿಯ ಪರಿಶೀಲನೆ ನಡೆಸಿದರು.
ಸರ್ವೇ ಇಲಾಖೆಯಲ್ಲಿ ಮಹತ್ವದ ದಾಖಲಾತಿಗಳಿರುತ್ತವೆ ಎನ್ನುವುದನ್ನು ಕಾರ್ಯನಿರ್ವಹಿಸುವ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಮರೆಯಬಾರದು. ಯಾರಾದರೂ ಬಂದು ಯಾವುದಾದರೂ ದಾಖಲೆಯನ್ನು ಹಿಡಿದುಕೊಂಡು ಹೋದರೇನು ಮಾಡುತ್ತೀರಿ? ಕಚೇರಿಯ ಒಳಗಿರುವವರು ಸಿಬ್ಬಂದಿಗಳೇ ಎಂದು ಪ್ರಶ್ನಿಸುತ್ತಿದ್ದಂತೆ ಹೌದು ಎಂದು ಸಿಬ್ಬಂದಿ ಮಡಿವಾಳರ ಹೇಳಿದಾಗ, ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಮಿನಿ ವಿಧಾನಸೌಧದ ಬಹುತೇಕ ಕೊಠಡಿಗಳು ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟುರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಇಂತಹ ಕೊಠಡಿಗಳಲ್ಲಿ ಕೆಲಸ ನಿರ್ವಹಿಸದಿರಲು ತಹಸೀಲ್ದಾರ ಕೆ. ನಾಗರಾಜ್ರವರಿಗೆ ಸೂಚಿಸಿದರು. ಬಿರುಕು ಬಿಟ್ಟ ಕೊಠಡಿಗಳ ಬಗ್ಗೆ ವರದಿ ಸಲ್ಲಿಸಿ ಎಂದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ದಾಖಲಾತಿ ಕೊಠಡಿ ಬಳಿ ಇರುವ ಕೌಂಟರ್ ಸಣ್ಣದಾಗಿಸಿ ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ನಾಗರಾಜ ಕೆ, ಉಪತಹಸೀಲ್ದಾರ ಜೆ.ಟಿ. ಕೊಪ್ಪದ, ಮುಖ್ಯಾಧಿಕಾರಿ ಹೊಸಮನಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ, ನಮ್ಮ ಜಮೀನಿಗೆ ತೆರಳಲು ದಾರಿ ಬಿಡುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ದಾರಿ ಕೊಡಿಸಿ ಎಂದು ರೈತರೊಬ್ಬರು ಅಳಲು ತೊಡಿಕೊಂಡರು. ಈ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ನಕ್ಷೆಯಲ್ಲಿ ಇದ್ದರೆ ಮಾತ್ರ ನಾವು ದಾರಿ ಕೊಡಿಸುತ್ತೇವೆ, ಇಲ್ಲದಿದ್ದರೆ ನಿವೇ ಸ್ಥಳೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದರು.