ವಿಜಯಸಾಕ್ಷಿ ಸುದ್ದಿ, ರೋಣ: ಆನವರಿ 19ರಿಂದ ಮೂರು ದಿನಗಳ ಕಾಲ ಗಜೇಂದ್ರಗಡ ತಾಲೂಕಿನಲ್ಲಿ ಜರುಗುವ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅತ್ಯಂತ ಸಂಭ್ರಮದಿಂದ, ಯಶಸ್ವಿಯಾಗಿ ನಡೆಸಬೇಕು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪುರಸಭೆಯ ಸಭಾಂಗಣದಲ್ಲಿ ಎರಡು ತಾಲೂಕಿನ ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಹಿಂದೆ ನಡೆಯಬೇಕಿದ್ದ ಸಮ್ಮೇಳನವನ್ನು ಅಬ್ಬಿಗೇರಿಯಲ್ಲಿ ಜರುಗಿದ ಧಾರ್ಮಿಕ ಸಮ್ಮೇಳನ ಮತ್ತು ಗಜೇಂದ್ರಗಡ ನಗರದಲ್ಲಿ ಜರುಗಿದ ಬಸವ ಪುರಾಣದ ನಿಮಿತ್ತ ಮುಂದೂಡಲಾಗಿತ್ತು. ಈಗ ಕನ್ನಡದ ಜಾತ್ರೆಗೆ ಕಾಲ ಕೂಡಿ ಬಂದಿದ್ದು, ಸಮ್ಮೇಳನದ ಯಶಸ್ವಿಗೆ ಅಧಿಕಾರಿಗಳು ಸೇರಿದಂತೆ ಎರಡೂ ತಾಲೂಕಿನ ನಾಗರಿಕ ಸಮುದಾಯ ಶ್ರಮಿಸಬೇಕು ಎಂದರು.
ಜ. 19ರಂದು ಕರ್ನಾಟಕ ಏಕೀರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಜಕ್ಕಲಿ ಗ್ರಾಮದಿಂದ ಕನ್ನಡ ತೇರಿನ ಮೇರವಣಿಗೆ ಸಾಗಬೇಕು. ಮಹನೀಯರುಗಳ ವಿಚಾರಾಧಾರೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯಬೇಕು. ಮುಖ್ಯವಾಗಿ ತೇರು ಸಾಗುವ ಮಾರ್ಗಗಳು ಸ್ವಚ್ಛತೆಯಿಂದ ಕೂಡಿರಬೇಕು. ಅಧಿಕಾರಿಗಳು, ಶಾಲಾ ಮಕ್ಕಳು, ಗ್ರಾಮಸ್ಥರು ಸೇರಿದಂತೆ ಕನ್ನಡಪರ ಸಂಘಟನೆಗಳು ಭಾಗಿಯಾಗಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾಧ್ಯಕ್ಷ ವೆಂಕನಗೌಡ ಪಾಟೀಲ, ತಾಲೂಕಾಧ್ಯಕ್ಷ ರಮಾಕಾಂತ ಕಮತಗಿ, ತಹಸೀಲ್ದಾರ್ ನಾಗರಾಜ ಕೆ, ಕಿರಣಕುಮಾರ ಕುಲಕರ್ಣಿ, ಸಿದ್ದಣ್ಣ ಬಂಡಿ, ಮುಖ್ಯಾಧಿಕಾರಿ ರಮೇಶ ಹೊಸಮನಿ, ತಾ.ಪಂ ಇಒ ಚಂದ್ರಶೇಖರ, ಮಂಜುಳಾ ಹಕಾರಿ, ವ್ಹಿ.ಬಿ. ಸೋಮನಕಟ್ಟಿಮಠ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ಸಮ್ಮೇಳನದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು. ಕನ್ನಡಾಭಿಮಾನಿಗಳಿಗೆ ತೊಂದರೆಯಾಗಬಾರದು. ಸಾಹಿತಿಗಳಿಗೆ, ಕವಿಗಳಿಗೆ, ವಿಚಾರ ಗೋಷ್ಠಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಕನ್ನಡದ ಜಾತ್ರೆ ಅದ್ಧೂರಿಯಾಗಿ ಜರುಗಬೇಕು. ಈ ಕಾರ್ಯಕ್ರಮಕ್ಕೆ ನನ್ನ ಸಹಕಾರ ಇದ್ದೇ ಇದೆ.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.
ಮುಖಂಡರಾದ ವಿ.ಬಿ. ಸೋಮನಕಟ್ಟಿಮಠ ಮಾತನಾಡಿ, ಸ್ಥಳೀಯ ಮಹನೀಯರು ದೇಶಕ್ಕೆ, ನಾಡಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅಂತಹ ಮಹನೀಯರನ್ನು ಗುರುತಿಸಿ ಅವರ ಹೆಸರುಗಳಿಂದ ವೇದಿಕೆ ನಿರ್ಮಿಸುವ ಕಾರ್ಯವನ್ನು ಕಸಾಪ ಮಾಡಬೇಕು. ನಮ್ಮ ಮಹನೀಯರು ಸಾರಿದ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.