ವಿಜಯಸಾಕ್ಷಿ ಸುದ್ದಿ, ಗದಗ: ಅನಾದಿ ಕಾಲದಿಂದಲೂ ನಮ್ಮ ರಾಜ-ಮಹಾರಾಜರು ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತು ಸಂವರ್ಧನೆಗಾಗಿ ಅತ್ಯಂತ ಶ್ರೇಷ್ಠವಾದ ಸಾವಿರಾರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು. ಈ ದೇವಸ್ಥಾನಗಳ ಮಾಧ್ಯಮದಿಂದ ನಡೆಯುತ್ತಿದ್ದ ಗುರುಕುಲ, ವೇದ ಪಾಠಶಾಲೆ, ಗೋಶಾಲೆಗಳ ಮೂಲಕ ರಾಷ್ಟ್ರಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಕಾರ್ಯವು ವ್ಯಾಪಕವಾಗಿ ನಡೆಯುತ್ತಿತ್ತು. ಆದರೆ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಜಾತ್ಯಾತೀತ ವ್ಯವಸ್ಥೆಯ ಪ್ರಭಾವದಿಂದ ನಮ್ಮ ದೇವಸ್ಥಾನಗಳ ಸ್ಥಾಪನೆಯ ಮೂಲ ಉದ್ದೇಶವೂ ಅರ್ಥವನ್ನು ಕಳೆದುಕೊಳ್ಳಲು ಪ್ರಾರಂಭವಾಯಿತು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದಗೌಡ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ಧರ್ಮದ ಆಧಾರ ಸ್ಥಂಭವಾದ ದೇವಸ್ಥಾನಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು 2016ರಲ್ಲಿ ಮಂದಿರ ಮಹಾ ಸಂಘವನ್ನು ಪ್ರಾರಂಭ ಮಾಡಿದ್ದು, ಈ ಮಹಾಸಂಘದ ಮಾಧ್ಯಮದಿಂದ ಕಳೆದ 9 ವರ್ಷಗಳಿಂದ ನಿರಂತರವಾಗಿ ದೇವಸ್ಥಾನ ಸಂರಕ್ಷಣೆ ದೃಷ್ಟಿಯಿಂದ ಅನೇಕ ಯಶಸ್ವಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ದೇವಸ್ಥಾನ ವಿಶ್ವಸ್ಥರು, ಪುರೋಹಿತರು ಮತ್ತು ಈ ಕ್ಷೇತ್ರದಲ್ಲಿ ಕಾರ್ಯ ಮಾಡುವ ವಕೀಲರನ್ನು ಸೇರಿಸಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮಂದಿರ ಅಧಿವೇಶನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಅಧಿವೇಶನದ ಮಾಧ್ಯಮದಿಂದ ದೇವಸ್ಥಾನಗಳ ವ್ಯಾಪಕ ಸಂಘಟನೆ, ಧಾರ್ಮಿಕ ಶಿಕ್ಷಣವನ್ನು ನೀಡುವುದು, ಸಾಮೂಹಿಕ ಆರತಿ, ವಸ್ತ್ರ ಸಂಹಿತೆ ಜಾರಿ ಮಾಡುವುದು, ಅನ್ಯಾಯಗಳನ್ನು ತಡೆಗಟ್ಟಲು ನಿರಂತರವಾಗಿ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದೇ ಉದ್ದೇಶದಿಂದ ಫೆಬ್ರವರಿ 13ರ ಬೆಳಿಗ್ಗೆ 10 ಗಂಟೆಗೆ ಗದುಗಿನ ಲಕ್ಷ್ಮಣ ನಗರದ ಶ್ರೀ ಕನಕ ಭವನದಲ್ಲಿ ಜಿಲ್ಲಾ ಮಟ್ಟದ ಮಂದಿರ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಈ ಅಧಿವೇಶನದಲ್ಲಿ ಗದಗ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಧಾರವಾಡ ಜಿಲ್ಲೆಯ ಕೆಲವು ತಾಲೂಕುಗಳಿಂದ 300ಕ್ಕೂ ಹೆಚ್ಚು ದೇವಸ್ಥಾನ ವಿಶ್ವಸ್ಥರು ಮತ್ತು ಪುರೋಹಿತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಅಧಿವೇಶನದಲ್ಲಿ ದೇವಸ್ಥಾನಗಳ ಮೂಲಕ ವ್ಯಾಪಕ ಧರ್ಮಪ್ರಚಾರ ಹೇಗೆ ಮಾಡುವುದು, ದೇವಸ್ಥಾನಗಳ ಸಂಘಟನೆಯ ಅವಶ್ಯಕತೆ, ಆದರ್ಶ ವ್ಯವಸ್ಥಾಪನೆ, ಕೆಲ ಸಂದರ್ಭದಲ್ಲಿ ಬರುವ ಕಾನೂನು ಅಡಚಣೆಗಳಿಗೆ ವಕೀಲರಿಂದ ಸೂಕ್ತ ಕಾನೂನು ಮಾರ್ಗದರ್ಶನ ಹೀಗೆ ಅನೇಕ ವಿಷಯಗಳ ಬಗ್ಗೆ ಈ ಕ್ಷೇತ್ರದಲ್ಲಿ ಕಾರ್ಯ ಮಾಡುವ ಅನೇಕ ಗಣ್ಯ ವಕ್ತಾರರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಗುರುಪ್ರಸಾದಗೌಡ ತಿಳಿಸಿದರು.