ವಿಜಯಸಾಕ್ಷಿ ಸುದ್ದಿ, ಗದಗ : 2022-23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೊಮಾದಲ್ಲಿ ಉತ್ತೀರ್ಣರಾದ ಅರ್ಹ ಫಲಾನುಭವಿಗಳಿಗೆ ಯುವನಿಧಿ ಯೋಜನೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ನಲ್ಲಿ ಸೋಮವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವನಿಧಿ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಪರೀಶೀಲಿಸಿ ಅನುಮೋದನೆ ನೀಡಿ, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿದರು.
ಈಗಾಗಲೇ ಯುವನಿಧಿ ಪಡೆಯುತ್ತಿರುವವರು ಪ್ರತಿ ತಿಂಗಳು 25ನೇ ತಾರಿಕಿನೊಳಗಾಗಿ ತಾನೂ ನಿರುದ್ಯೋಗಿ, ಹಾಗೂ ವ್ಯಾಸಂಗ ಮುದುವರೆಸುತ್ತಿಲ್ಲ ಮತ್ತು ಸ್ವಯಂ ಉದ್ಯೋಗಿ ಅಲ್ಲ ಎಂದು ಸ್ವಯಂ ಘೋಷಣೆ ಮಾಡುವ ಕುರಿತು ಅರ್ಜಿದಾರರಿಗೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲರೂ ಬಸವರಾಜ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಉತ್ತಮ ಗುಣಮಟ್ಟ ಹೊಂದಿರುವ ತರಬೇತಿ ಸಂಸ್ಥೆಯ ವರದಿ ನೀಡಿದರು. ಕೈಗಾರಿಕಾ ಕ್ಷೇತ್ರಗಳಿಗೆ ಉದ್ಯೋಗ ಬೇಡಿಕೆಯ ಅನುಸಾರ ಐ.ಟಿ ವಲಯ, ಆಟೋಮೋಟಿವ್, ಏರೋಸ್ಪೇಸ್ ಮುಂತಾದ ವಲಯಗಳಲ್ಲಿ ಅವಶ್ಯವಿರುವ ಹೊಸ ಜಾಬ್ ಲೋಲ್ಗಳ ಕುರಿತು ಮಾಹಿತಿ ನೀಡಿದರು. ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಮತ್ತು ಸಂಕಲ್ಪ ಕಾರ್ಯಕ್ರಮ ಅಡಿಯಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಕೌಶಲ್ಯ ತರಬೇತಿಗಳನ್ನು ಪ್ರಾರಂಭಿಸಿರುವ ಕುರಿತು ಸಭೆಗೆ ವರದಿ ಸಲ್ಲಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟೂರ, ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜಿಕರ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾ ಪಾಳೆಗಾರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಯುವನಿಧಿ ಅರ್ಜಿದಾರರ ವರದಿ ಗಮನಿಸಿದ ಜಿಲ್ಲಾಧಿಕಾರಿಗಳು, ಅರ್ಜಿ ಸಲ್ಲಿಕೆಯಾದ ನಂತರ ಮೂಲಭೂತ ದಾಖಲಾತಿಯನ್ನು ಸಂಬಂಧಿಸಿದ ಅಧಿಕಾರಿಗಳ ಹಂತದಲ್ಲಿ ಪರೀಶಿಲನೆ ಮಾಡುವುದರ ಬಗ್ಗೆ ಅರ್ಜಿದಾರರಿಗೆ ಜಾಗೃತಿ ಮೂಡಿಸಿ. ಆದಷ್ಟು ಬೇಗ ವಿವಿಧ ಅಧಿಕಾರಿಗಳ ಲಾಗಿನ್ನಲ್ಲಿರುವ ಅರ್ಜಿಗಳನ್ನು ಅನುಮೋದಿಸಬೇಕು ಎಂದು ತಿಳಿಸಿದರು.



