ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ ಇಲ್ಲಿಯವರೆಗೆ ವಾಡಿಕೆ ಮಳೆ 96 ಮಿಮೀ ಇದ್ದು, ಪ್ರಸ್ತುತ 122.1 ಮಿ. ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.26 ಜಾಸ್ತಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 8 ಸಣ್ಣ ಜಾನುವಾರುಗಳು ಮರಣಹೊಂದಿವೆ ಮತ್ತು 99 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಸದರಿ ಮರಣ ಹೊಂದಿದ ಜಾನುವಾರು ಮತ್ತು ಹಾನಿಗೊಳಗಾದ ಮನೆಗಳಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ವಯ ಪರಿಹಾರ ಪಾವತಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತು ಬೆಣ್ಣೆಹಳ್ಳ ಪ್ರವಾಹದಿಂದ ಒಟ್ಟು 28,173 ಹೆಕ್ಟೇರ್ ಪ್ರದೇಶ ಬೆಳೆಹಾನಿಗೊಳಗಾಗಿದೆ. ಆ ಪೈಕಿ 17652 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಮತ್ತು 10521 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ.
ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ವಯ ಬೆಳೆಹಾನಿಗೆ ಸರ್ಕಾರ ರೂ 29.37 ಕೋಟಿ ಪರಿಹಾರ ಮೊತ್ತ ನೀಡಬೇಕಾಗಿದೆ. ಈ ಕುರಿತು ಜಂಟಿ ಸರ್ವೇ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.