ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಳೆರಾಯ ಸ್ವಲ್ಪ ಬಿಡುವು ನೀಡಿದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಬಲಿಪಾಡ್ಯಮಿ ಹಬ್ಬವನ್ನು ಪಟ್ಟಣ ಸೇರಿ ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸ ಉಡುಗೆತೊಟ್ಟು, ಪಟಾಕಿ ಸಿಡಿಸಿ ಮನೆ, ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು.
ಸಂಪ್ರದಾಯದಂತೆ ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಪಟ್ಟಣದ ವ್ಯಾಪಾರಸ್ಥರ ಅಂಗಡಿ ಹಾಗೂ ಭಕ್ತರ ಮನೆಗಳಿಗೆ ಭೇಟಿ ನೀಡಿ ದೀಪಾವಳಿ ಪಾಡ್ಯದ ಪೂಜೆಯಲ್ಲಿ ಪಾಲ್ಗೊಂಡು ಭಕ್ತರಿಗೆ ಶುಭಾಶೀರ್ವಾದ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು, ಅಜ್ಞಾನ, ಅಂಧಕಾರ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದು ಹಬ್ಬದ ವೈಶಿಷ್ಠ್ಯವಾಗಿದೆ. ದೀಪವು ಧರ್ಮ, ಸಂಸ್ಕೃತಿ, ಜ್ಞಾನ ಮತ್ತು ಆಧ್ಯಾತ್ಮದ ಸಂಕೇತವಾಗಿ ಎಲ್ಲರ ಬದುಕಿಗೂ ಸ್ಪೂರ್ತಿಯ ಚಿಲುಮೆಯಾಗಿದೆ. ದೀಪ ತಾನು ಉರಿದು ಜಗತ್ತಿಗೆಲ್ಲ ಬೆಳಕು ನೀಡುವಂತೆ ಮನುಷ್ಯ ನಿತ್ಯ ಬದುಕಿನಲ್ಲಿ ಬಡವರ, ಅಸಹಾಯಕರ ಸೇವೆ, ದಾನ-ಧರ್ಮ ರೂಢಿಸಿಕೊಳ್ಳುವುದರಿಂದ ಶಾಂತಿ, ಸಮೃದ್ಧಿಯ ಬದುಕನ್ನು ಹೊಂದಬಹುದು. ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಹಬ್ಬಗಳನ್ನು ತಪ್ಪದೇ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ನುಡಿದರು.
ಶ್ರೀಗಳು ಪಟ್ಟಣದಲ್ಲಿನ ಭಕ್ತರ ಅಂಗಡಿಗಳಿಗೆ ಆಗಮಿಸಿದಾಗ ಸಂಪ್ರದಾಯದಂತೆ ಶ್ರೀಗಳ ಪಾದಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಜಿ.ಎಂ. ಮಹಾಂತಶೆಟ್ಟರ, ಆನಂದ ಮೆಕ್ಕಿ, ಚಂಬಣ್ಣ ಬಾಳಿಕಾಯಿ, ಡಾ. ಎಸ್.ಜಿ. ಹೂವಿನ, ರುದ್ರಪ್ಪ ವಡಕಣ್ಣವರ, ಗಂಗಾಧರ ಮೆಕ್ಕಿ, ಪ್ರವೀಣ ಹಾವೇರಿ, ಗದಿಗೆಪ್ಪ ಯತ್ನಳ್ಳಿ, ಚಂದ್ರಣ್ಣ ಮೆಕ್ಕಿ, ಗಂಗಾಧರ ಪುರಾಣಿಕಮಠ, ಶಿವಯೋಗಿ ವಡಕಣ್ಣವರ, ರೇಖಾ ವಡಕಣ್ಣವರ, ಸುನೀಲ ಮಹಾಂತಶೆಟ್ಟರ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಎಸ್.ಎಸ್. ಹೂವಿನ, ಡಾ. ಹಿಪ್ಪರಗಿ, ಡಾ. ಶೃತಿ ಹೂವಿನ ಮುಂತಾದವರಿದ್ದರು.