ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಹತರಾದ ಬೆಂಗಳೂರಿನ ಭರತ್ ಭೂಷಣ್ ಅವರ ಪಾರ್ಥೀವ ಶರೀರ, ಮತ್ತಿಕೆರೆಯಲ್ಲಿರುವ ಅವರ ನಿವಾಸ ತಲುಪಿದೆ.
ಕಾಂಗ್ರೆಸ್ ನಾಯಕ ನಗರದ ಮತ್ತಿಕೆರೆಲ್ಲಿರುವ ಭರತ್ ಭೂಷಣ್ ಅವರ ಮನೆಗೆ ಆಗಮಿಸಿದ ಡಿಕೆ ಸುರೇಶ್ ಭರತ್ ಭೂಷಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು, “ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯನ್ನು ನಾವು ಖಂಡಿಸುತ್ತೇವೆ. ಮೊದಲು ದೇಶ ನಂತರ ಉಳಿದ ವಿಚಾರಗಳು. ಈ ದಾಳಿ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು, ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕು. ಭವಿಷ್ಯದಲ್ಲಿ ನಮ್ಮ ಪ್ರಜೆಗಳ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರ ಜೀವವೂ ಬಹಳ ಮುಖ್ಯವಾದುದು” ಎಂದು ತಿಳಿಸಿದರು.
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ವಿಡಿಯೋಗಳನ್ನು ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ನೀನು ಹಿಂದೂನಾ? ಅಲ್ಲ ಮುಸ್ಲಿಂನಾ ಅಂತ ಕೇಳಿ ತಲೆಗೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಈ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬೆನ್ನಲ್ಲೇ ರಾಜ್ಯ ಪ್ರವಾಸಿ ತಾಣಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.