ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಗ್ನಿ ಆಕಸ್ಮಿಕಗಳು ಸಂಭವಿಸಿದಾಗ ಅದರಲ್ಲಿ ಸಿಲುಕಿದವರನ್ನು ರಕ್ಷಿಸುವಲ್ಲಿ ಆ ಜಾಗದಲ್ಲಿರುವ ವಿದ್ಯಾರ್ಥಿಗಳಾಗಲಿ, ಸಾರ್ವಜನಿಕರಾಗಲಿ ಹೇಗೆ ವರ್ತಿಸಬೇಕು ಮತ್ತು ಅದರಿಂದ ರಕ್ಷಣೆ ಮಾಡುವ ಬಗೆ ಹೇಗೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಪ್ರಾತ್ಯಕ್ಷಿತೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಎಸ್.ವೈ. ಪಾಟೀಲ ಹೇಳಿದರು.
ಅವರು ಸಮೀಪದ ಅಡರಕಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆ ಲಕ್ಷ್ಮೇಶ್ವರ ಘಟಕದಿಂದ ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ಅಗ್ನಿಶಾಮಕ ಇಲಾಖೆಯಿಂದ ಪ್ರಾತ್ಯಕ್ಷಿಕೆ/ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ರೀತಿಯ ಅಪಾಯ ಸಂಭವಿಸಿದಲ್ಲಿ ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳದೆ ಅದರಿಂದ ಪಾರಾಗುವ ರೀತಿಯನ್ನು ತಿಳಿದುಕೊಂಡಲ್ಲಿ ಅನೇಕ ಸಂದರ್ಭಗಳಲ್ಲಿ ತಮ್ಮ ಹಾಗೂ ಇತರರ ಜೀವ ರಕ್ಷಣೆ ಮಾಡಿಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದರು.
ಪ್ರಥಮ ಹಂತದಲ್ಲಿ ಶಾಲೆಯ ಕೊಠಡಿಯಲ್ಲಿ ಶಾಲಾ ಮಕ್ಕಳಿಗೆ ಅಗ್ನಿ ಅನಾಹುತ ತಡೆಗಟ್ಟುವ ಕುರಿತು ಇಲಾಖೆ ಸಿಬ್ಬಂದಿ ಎಂ.ಎಚ್. ಕಡ್ಡಿಪೂಜಾರ ತಿಳಿಸಿದರು. ಎಸ್ಡಿಎಂಸಿ ಸದಸ್ಯ ಕುಮಾರ ಚಕ್ರಸಾಲಿ ಮಾತನಾಡಿ, ಅಗ್ನಿ ಅನಾಹುತಗಳು ಹಾಗೂ ತುರ್ತು ಸಂದರ್ಭದಲ್ಲಿ ತಕ್ಷಣ ಪರಿಹಾರವನ್ನು ಕಂಡುಕೊಳ್ಳುವುದರ ಬಗ್ಗೆ ಈ ವೇದಿಕೆಯು ಶಾಲಾ ಮಕ್ಕಳಿಗೆ ನೆರವಾಗಲಿದೆ ಎಂದು ಹೇಳಿದರು.
ನಂತರ ಶಾಲೆಯ ಎಲ್ಲಾ ಮಕ್ಕಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಶಾಲಾ ಆವರಣದಲ್ಲಿ ಅಗ್ನಿ ಅನಾಹುತಗಳು ಹಾಗೂ ಅದನ್ನು ತಡೆಗಟ್ಟುವ ಕುರಿತು ಪ್ರಾತ್ಯಕ್ಷಿಕೆ/ಅಣಕು ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಲಕ್ಷ್ಮೇಶ್ವರ ಘಟಕದ ಸಿಬ್ಬಂದಿ ವರ್ಗ, ಶಾಲೆಯ ಸಿಬ್ಬಂದಿ ವರ್ಗ, ಎಸ್ಡಿಎಂಸಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯೆ ಎಸ್.ಹೆಚ್. ಉಮಚಗಿ ಸ್ವಾಗತಿಸಿದರು. ಡಿ.ಡಿ. ಲಮಾಣಿ ನಿರೂಪಿಸಿದರು. ಎಸ್.ಕೆ. ಅಮ್ಮಿನಭಾವಿ ವಂದಿಸಿದರು.