ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮನ್ನು ಹೆತ್ತ ತಂದೆ-ತಾಯಿಗಳು ನಿಮ್ಮ ಬಗ್ಗೆ ಅಪಾರವಾದ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮ ಕಷ್ಟಗಳನ್ನು ಸಹಿಸಿಕೊಂಡು ನಿಮ್ಮ ವಿದ್ಯಾಭ್ಯಾಸಕ್ಕೆ ಅವರು ಶ್ರಮಿಸುತ್ತಿದ್ದಾರೆ. ಅವರ ಕನಸುಗಳನ್ನು ನೀವು ಎಂದಿಗೂ ನಿರಾಸೆ ಮಾಡಬೇಡಿ ಎಂದು ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಪಟ್ಟಣದ ಅಭಿನವ ಅನ್ನದಾನೇಶ್ವರ ಪಿಯು ಕಾಲೇಜಿನ ವಿವಿಧ ಸಾಂಘಿಕ ಚಟುವಟಿಕೆಗಳ ಮುಕ್ತಾಯ ಹಾಗೂ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಿಯು ನಂತರದ ಗುರಿಯನ್ನು ಈಗಲೇ ನಿರ್ಧರಿಸಿಕೊಳ್ಳಿ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ನಿಮ್ಮ ಗುರಿಯನ್ನು ತಲುಪಲು ನೀವು ಇಂದಿನಿಂದಲೇ ಸಿದ್ಧರಾಗಿ. ಸರಿಯಾದ ಯೋಚನೆಯನ್ನು ಮಾಡಿ ಜೀವನದಲ್ಲಿ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ ಎಂದು ಹೇಳಿದರು.
ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ ಮಾತನಾಡಿ, ನಿಮ್ಮ ಭವಿಷ್ಯದ ಹಿಂದೆ ನಿಮ್ಮ ಪಾಲಕರ ಶ್ರಮವಿದೆ. ಗುರಿಯಿಲ್ಲದವ ಜೀವನದಲ್ಲಿ ಏನನ್ನೂ ಸಾಧಿಸಲಾರ. ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ. ಪರಿಶ್ರಮದಿಂದ ಮುಂದೆ ಬಂದವರಿಗೆ ಜಯದ ಮಾಲೆ ಎಂದಿಗೂ ದೊರಕುತ್ತದೆ ಎಂದರು.
ಎಸ್ಎ ಪಿಯು ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿ, ಪರೀಕ್ಷೆಯಲ್ಲಿ ನಕಲು ನಡೆಯುತ್ತದೆ, ನಾನು ಹೇಗಾದರೂ ಪಾಸಾಗಬಲ್ಲೆನೆಂಬ ವಿಚಾರವನ್ನು ಮೊದಲು ತೆಗೆದು ಹಾಕಿ. ಈ ಸಾರೆಯ ಪರೀಕ್ಷೆಗೆ ವೆಬ್ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ನಿಮ್ಮ ಸ್ವಂತಿಕೆ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಸ್ವಂತ ಬಲದ ಮೇಲೆ ನೀವು ಪರೀಕ್ಷೆ ಬರೆಯಲು ಸಿದ್ಧರಾಗಿ ಎಂದರು.
ಪ್ರಾಚಾರ್ಯೆ ಅನಸೂಯಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಪ್ರಗತಿಯ ಮುನ್ನೋಟವನ್ನು ನೀಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯ ಆರ್.ಜಿ. ಪಾಟೀಲ ಉಪಸ್ಥಿತರಿದ್ದರು.