ತರಕಾರಿಗಳಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಇವೆ ಎನ್ನುವುದು ಶತಃಸಿದ್ಧ. ಅದರಲ್ಲೂ ಕೆಲವು ತರಕಾರಿಗಳು ಪೋಷಕಾಂಶಗಳ ಆಗರ. ಬೀಟ್ ರೂಟ್ ಕೂಡ ಇದರಲ್ಲಿ ಒಂದಾಗಿದೆ. ಬೀಟ್ ರೂಟ್ ಆರೋಗ್ಯಕ್ಕೆ ತುಂಬಾ ಲಾಭಕಾರಿ ಮತ್ತು ಇದರಲ್ಲಿ ಅಧಿಕ ಪೋಷಕಾಂಶಗಳಿದ್ದು, ದೇಹಾರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುವುದು. ಬೀಟ್ ರೂಟ್ ನಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ.
ಮೆದುಳಿನ ಸಹಿತ ದೇಹದ ಪ್ರತಿಯೊಂದು ಅಂಗಾಂಗವು ಹೆಚ್ಚಿನ ರಕ್ತ ಸಂಚಾರವನ್ನು ಪಡೆದರೆ, ಆಗ ದೇಹವು ಹೆಚ್ಚು ಆಮ್ಲಜನಕ ಸರಬರಾಜು ಮಾಡಿದೆ ಎಂದು ಅರ್ಥ. ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವಂತಹ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದು ಮತ್ತು ರಕ್ತ ಸಂಚಾರವನ್ನು ಸುಗಮಗೊಳಿಸಲು ನೆರವಾಗುವುದು.
ಬೀಟ್ರೂಟ್ನಲ್ಲಿ ವಿಟಮಿನ್ ಸಿ, ಮೆಗ್ನೇಶಿಯಂ ಹಾಗೂ ಕ್ಯಾಲ್ಶಿಯಂ ಹೇರಳವಾಗಿದ್ದು, ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದ ತ್ರಾಣವು ಹೆಚ್ಚಾಗುತ್ತದೆ. ಇದೇ ನೈಟ್ರೇಟ್ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡ ಬಳಿಕ ವ್ಯಾಯಾಮ ಮತ್ತು ಇತರ ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಉಪಯೋಗವನ್ನು ತಗ್ಗಿಸುವ ಪರಿಣಾಮವಾಗಿ ದಣಿವು ಕಡಿಮೆ ಆಗುವುದು.
ಮಧುಮೇಹವೂ ದೂರ ಸಾಮಾನ್ಯವಾಗಿ ಮಧುಮೇಹದಿಂದ ಬಳಲುತ್ತಿರುವವರು ಬೀಟ್ರೂಟ್ ಸೇವನೆ ಮಾಡಲು ಹಿಂದೇಟು ಹಾಕುತ್ತಾರೆ. ಹಾಗೆಂದು ಬೀಟ್ರೂಟನ್ನೇ ಸೇವನೆ ಮಾಡದೆ ಸಂಪೂರ್ಣವಾಗಿ ನಿಯಂತ್ರಿಸಬಾರದು. ಮಧುಮೇಹದಿಂದ ಬಳಲುತ್ತಿರುವವರೂ ಕೂಡ ಮಧ್ಯಮ ಪ್ರಮಾಣದಲ್ಲಿ ಸೇವನೆ ಮಾಡಬಹುದಾಗಿದೆ.
ಕೂದಲಿಗೆ ಕಾಂತಿ ನೀಡುವುದು ಬೀಟ್ರೂಟ್ ಜ್ಯೂಸ್ ಕೂದಲಿನ ಕಾಂತಿ ಮತ್ತು ಹೊಳಪವನ್ನು ಕಾಪಾಡಿಕೊಂಡು ಸಂಪೂರ್ಣ ಆರೋಗ್ಯ ಕಾಪಾಡುವುದು. ನೈಸರ್ಗಿಕವಾಗಿ ಸೌಂದರ್ಯ ಪಡೆಯಲು ನೀವು ಕೂದಲಿಗೆ ಕೂಡ ಬೀಟ್ ರೂಟ್ ಬಳಸಬಹುದು. ಬೀಟ್ ರೂಟ್ ಕೂದಲಿನ ಗುಣಮಟ್ಟವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುವುದು.
ಕೂದಲು ಉದುರುವ ಸಮಸ್ಯೆ ನಿವಾರಣೆ ಒಣ ತಲೆಬುರುಡೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ನೀವು ಬೀಟ್ರೂಟ್ ಜ್ಯೂಸ್ ಬಳಸಿ. ಬೀಟ್ ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ರೂಟ್ ಜ್ಯೂಸ್ಗೆ ವಿನೇಗರ್ ಹಾಕಿದರೆ ಆಗ ಒಣ ತಲೆಬುರುಡೆ ಸಮಸ್ಯೆ ನಿವಾರಣೆಯಾಗುತ್ತದೆ.
ಬೊಜ್ಜು ಸಮಸ್ಯೆಯೂ ಕಡಿಮೆಯಾಗುವುದು ದೀರ್ಘಕಾಲದ ಉರಿಯೂತ, ಪಿತ್ತಜನಕಾಂಗ ಸಂಬಂಧಿಸಿದ ಕಾಯಿಲೆಗಳು, ಬೊಜ್ಜು ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಈ ಬೀಟ್ರೂಟ್ ಸಾಕಷ್ಟು ಉಪಯೋಗಗಳನ್ನು ನೀಡಬಲ್ಲದು.
ರಕ್ತಹೀನತೆ ಸಮಸ್ಯೆಗೆ ಪರಿಹಾರ ರಕ್ತಹೀನತೆ, ರಕ್ತದ ಶುದ್ಧೀಕರಣ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಲ್ಲುಗಳ ಸಮಸ್ಯೆಗಳನ್ನೂ ದೂರಾಗಿಸುತ್ತದೆ. ಆದರೆ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಬೀಟ್ ರೂಟ್ ಸೇವನೆ ಮಾಡುವ ವೇಳೆ ಬಹಳ ಎಚ್ಚರದಿಂದ ಇರಬೇಕಾಗುತ್ತದೆ.